ಕೇರಳದಲ್ಲಿ ಬಿಜೆಪಿಗೆ ಬಹುಮತ ಪಕ್ಕಾ: ಶ್ರೀಧರನ್

ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಬಹುಮತಗಳಿಂದ ಗೆಲುವು ಸಾಧಿಸಲಿದೆ ಎಂದು ಮೆಟ್ರೋಮ್ಯಾನ್ ಶ್ರೀಧರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾಲಕ್ಕಾಡ್ ನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋನಲ್ಲಿ ಭಾಗಿಯಾಗಿ ಮಾತನಾಡಿದರು. ನನ್ನ ಪ್ರಕಾರ ಕೇರಳದಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ. ಕಿಂಗ್ ಮೇಕರ್ ಆಗಲು ಬೇಕಾದ ಸ್ಥಾನಗಳು ಬಿಜೆಪಿಗೆ ಸಿಗಲಿದೆ ಎಂದು ಶ್ರೀಧರನ್ ಹೇಳಿದರು.

ಕೇರಳದಲ್ಲಿ ಯಾವುದೇ ಕೈಗಾರಿಕೆಗಳಿಲ್ಲ. ಕೈಗಾರಿಕೆಗಳಿಂದ ಮಾತ್ರ ರಾಜ್ಯಕ್ಕೆ ಸಂಪತ್ತು ತರಬಹುದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೇರಳಕ್ಕೆ ಕೈಗಾರಿಕೆಯನ್ನು ತರುತ್ತೇನೆ ಎಂದು ಭರವಸೆ ನೀಡಿದರು.

ನಿರುದ್ಯೋಗ ಕೂಡ ಕೇರಳದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಠಿಸುವ ಅಗತ್ಯತೆ ಇದೆ. ಅಲ್ಲದೆ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೆಚ್ಚಿಸುವ ಬಗ್ಗೆಯೂ ಪ್ರಯತ್ನಿಸುತ್ತೇನೆ. ಒಟ್ಟಿನಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ನಡೆಸುವುದೇ ನನ್ನ ಗುರಿಯಾಗಿದೆ ಎಂದರು.

ಹಿರಿಯರ ಕಾಲು ತೊಳೆಯುವುದು ನಮ್ಮ ಸಂಸ್ಕೃತಿಯಾಗಿದೆ. ಆದರೆ ಇದರ ಮಹತ್ವ ಎಡಪಕ್ಷಗಳಿಗೆ ತಿಳಿದಿಲ್ಲ. ಕಾಲು ತೊಳೆಯುವ ಮೂಲಕ ನಮ್ಮ ಹಿರಿಯರಿಗೆ ಗೌರವ ತೋರುವುದು ನಮ್ಮ ನಾಡಿನ ಸಂಸ್ಕೃತಿ . ಇದನ್ನು ಎಲ್ಲರೂ ಮಾಡುತ್ತಾರೆ. ನನ್ನ ಮಕ್ಕಳು ಕೂಡ ಹಿರಿಯರ ಕಾಲು ತೊಳೆಯುತ್ತಾರೆ. ಇದನ್ನು ಎಡಪಕ್ಷಗಳು ಟೀಕಿಸುವುದು ಸರಿಯಲ್ಲ. ಇದು ಸಂಪ್ರದಾಯದ ಬಗ್ಗೆ ಗೌರವ ಇಲ್ಲದಿರುವುದನ್ನು ಬಿಂಬಿಸುತ್ತದೆ ಎಂದು ಶ್ರೀಧರನ್ ಕಿಡಿಕಾರಿದ್ದಾರೆ.

ಏಪ್ರಿಲ್ 6 ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ.

Comments

Leave a Reply

Your email address will not be published. Required fields are marked *