ಕೇಂದ್ರ ಸರ್ಕಾರ ಅನುಮತಿ ನೀಡಿದ್ರೂ ಸದ್ಯಕ್ಕೆ ಶಾಲೆ ಪ್ರಾರಂಭ ಮಾಡಲ್ಲ: ಸುರೇಶ್ ಕುಮಾರ್

ಬೆಂಗಳೂರು: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೂ ಕೂಡ ಸದ್ಯಕ್ಕೆ ನಾವು ಶಾಲೆಯನ್ನು ಪ್ರಾರಂಭ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಶಾಲೆಯ ವಿಚಾರವಾಗಿ ಪೋಷಕರಿಗೆ ಇರುವ ಭಯ ಮತ್ತು ಆತಂಕವನ್ನು ನಿವಾರಣೆ ಮಾಡುವ ಜವಾಬ್ದಾರಿ ನನ್ನದು. ನಾನು ರಾಜ್ಯದ ಮಕ್ಕಳ ಪೋಷಕ ನನಗೂ ಆ ಜವಾಬ್ದಾರಿ ಇದೆ. ಪೋಷಕರ ಕಾಳಜಿ ಮತ್ತು ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈಗಾಗಲೇ ಚಂದನವಾಹಿನಿಯಲ್ಲಿ 8, 9 ಮತ್ತು 10ನೇ ತರಗತಿಗೆ ಪಾಠ ಮಾಡುತ್ತಿದ್ದೇವೆ. ಕೆಲ ಶಾಲೆಗಳು ಆನ್‍ಲೈನ್ ಕ್ಲಾಸ್ ಮಾಡುತ್ತಿವೆ. ನಾವು ಇನ್ನು ಉಳಿದ 1 ರಿಂದ 7ನೇ ತರಗತಿ ಮಕ್ಕಳಿಗಾಗಿ ಖಾಸಗಿ ವಾಹಿನಿಗಳಲ್ಲಿ ಪಾಠ ಶುರು ಮಾಡಲು ತೀರ್ಮಾನಿಸಿದ್ದೇವೆ. ಇದರ ಪ್ರಕ್ರಿಯೆ ನಡೆಯುತ್ತಿದೆ. ಅರ್ಧ ವರ್ಷ ಈಗಾಗಲೇ ಕಳೆದಿದೆ. ಶಾಲೆ ಪ್ರಾರಂಭ ಮಾಡಿದರೆ ಸಿಗುವ ಶೈಕ್ಷಣಿಕ ಅವಧಿಯಲ್ಲಿ ಪಠ್ಯ ಕಡಿತ, ಶನಿವಾರ ತರಗತಿ ಬಗ್ಗೆ ಚಿಂತನೆ ಮಾಡುತ್ತೇವೆ.

ಸದ್ಯಕ್ಕೆ ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಮಾಡುವುದಿಲ್ಲ. ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದ್ದರೂ ನಾವು ಸದ್ಯಕ್ಕೆ ಶಾಲಾ-ಕಾಲೇಜು ಪ್ರಾರಂಭ ಮಾಡುವುದಿಲ್ಲ. ತಕ್ಷಣವೇ ಶಾಲೆ ಪ್ರಾರಂಭ ಮಾಡುವ ಧಾವಂತ ನಮಗೆ ಇಲ್ಲ. ಪೋಷಕರು, ತಜ್ಞರು, ಶಿಕ್ಷಕರು ಜೊತೆ ಸಮಾಲೋಚನೆ ಮಾಡಿ ಅಂತಿಮ ನಿರ್ಧಾರ ಮಾಡುತ್ತೇವೆ. ಪೋಷಕರು ಆತಂಕವಾಗೋದು ಬೇಡ. ಯಾವುದೇ ಆತುರದಲ್ಲಿ ಶಾಲೆ ಪ್ರಾರಂಭ ಮಾಡುವುದಿಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದರು.

Comments

Leave a Reply

Your email address will not be published. Required fields are marked *