ಕೆಸುವಿನ ಎಲೆಯ ಖಾದ್ಯಕ್ಕೆ ಕಂಗನಾ ಫಿದಾ – ಕರಾವಳಿಯ ಪತ್ರೋಡೆ ಸವಿದ ನಟಿ

– ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ
– ಪತ್ರೋಡೆ ಮಾಡುವ ವಿಧಾನ

ಮುಂಬೈ: ಕರಾವಳಿಯ ಖಾದ್ಯ ಪತ್ರೋಡೆಯನ್ನು ಬಾಲಿವುಡ್ ನಟಿ ಕಂಗನಾ ರಾಣಾವತ್ ಸವಿದಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಮಳೆಗಾಲದಲ್ಲಿ ತುಳುನಾಡಿನ ಗದ್ದೆ, ತೋಟಗಳಲ್ಲಿ ಯಥೇಚ್ಚವಾಗಿ ಬೆಳೆಯುವ ಕೆಸುವಿನ ಎಲೆಯ ಖಾದ್ಯಕ್ಕೆ ಕಂಗನಾ ರಾಣಾವತ್ ಬೌಲ್ಡ್ ಆಗಿದ್ದಾರೆ. ತುಳುನಾಡಿನ ಖಾದ್ಯ ಪತ್ರೊಡೆಯ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಂಗನಾ ಬರೆದುಕೊಂಡಿದ್ದಾರೆ.

ಮಳೆಗಾಲ ಬಂತೆಂದರೆ ಸಾಕು ಕರಾವಳಿ ಭಾಗದಲ್ಲಿ ಕೆಸು ಬೆಳೆಯಲು ಆರಂಭಿಸುತ್ತದೆ. ಮೂರ್ನಾಲ್ಕು ತಿಂಗಳುಗಳ ಕಾಲ ಕೆಸುವಿನ ಎಲೆಯಲ್ಲಿ ಹಲವಾರು ಖಾದ್ಯಗಳನ್ನು ಕರಾವಳಿಗರು ತಯಾರು ಮಾಡುತ್ತಾರೆ. ಕೆಸುವಿನ ಎಲೆಯ ಪತ್ರೊಡೆ, ಕೆಸುವಿನ ಎಲೆಯ ಸಾರು, ಕೆಸುವಿನ ಎಲೆಯ ಚಟ್ನಿ, ಕೆಸುವಿನ ಕಾಂಡದ ಪಲ್ಯ ಹೀಗೆ ವಿವಿಧ ಖಾದ್ಯಗಳು ಕೆಸುವಿಂದ ಆಗುತ್ತದೆ.

ಹಿಮಾಚಲ ಪ್ರದೇಶದ ಕಂಗನಾಳಿಗೂ ಕೆಸುವಿನ ಪತ್ರೊಡೆ ಅಂದರೆ ಇಷ್ಟ. ತಮ್ಮ ತಾಯಿ ಪತ್ರೊಡೆಯನ್ನು ತಯಾರು ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕಂಗನಾ ಟ್ವೀಟ್‍ಗೆ ಕರಾವಳಿಯ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ.

ಕೆಸುವಿನ ಎಲೆಯಲ್ಲಿ ಅಗಾಧವಾದ ರೋಗನಿರೋಧಕ ಶಕ್ತಿ ಇದ್ದು, ಮಳೆಗಾಲದಲ್ಲಿ ಎಲೆಯನ್ನು ತಿಂದರೆ ದೇಹದ ಶಕ್ತಿ ವೃದ್ಧಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹೊಟ್ಟೆ ಸೇರಿರುವ ಉಗುರು, ತಲೆಗೂದಲಿನಂತಹ ಕರಗದ ವಸ್ತುಗಳನ್ನು ಕರಗಿಸುವ ಶಕ್ತಿ ಕೆಸುವಿನ ಎಲೆಗೆ ಮಾತ್ರ ಇರುತ್ತದೆ ಎಂಬುದು ಆಯುರ್ವೇದದಲ್ಲಿ ಸಾಬೀತಾಗಿದೆ. ಕರಾವಳಿಗರು ಮಳೆಗಾಲದಲ್ಲಿ ಒಂದೆರಡು ಬಾರಿಯಾದರೂ ಆಹಾರದಲ್ಲಿ ಕೆಸುವನ್ನು ಬಳಸುತ್ತಾರೆ. ಇದೀಗ ಕಂಗನಾ ರಾಣಾವತ್ ಪತ್ರೋಡೆ ಬಗ್ಗೆ ಪ್ರಸ್ತಾಪ ಮಾಡಿದ್ದು, ಕೆಸುವಿಗೆ ದೇಶ ಮಟ್ಟದಲ್ಲಿ ಪ್ರಚಾರ ಸಿಕ್ಕಂತಾಗಿದೆ.

ಪತ್ರೋಡೆ ಮಾಡುವ ವಿಧಾನ:
ಮೊದಲೇ ಅಕ್ಕಿ, ತೊಗರಿ ಬೇಳೆ ನೆನೆಸಿಡಬೇಕು. ಒಣ ಮೆಣಸಿನಕಾಯಿ, ಕೊತ್ತಂಬರಿ, ಅಕ್ಕಿ, ಉಪ್ಪು, ಹುಳಿ, ಬೆಲ್ಲ, ಸ್ವಲ್ಪ ಮೆಂತೆ, ಕೊಂಚ ತೊಗರಿ ಬೇಳೆಯನ್ನು ರುಬ್ಬಿ ಪೇಸ್ಟ್ ತಯಾರಿಸಬೇಕು. ಮಿಶ್ರಣದ ಪೇಸ್ಟನ್ನು ಕೆಸುವಿನ ಎಲೆಯ ಮೇಲೆ ತೆಳುವಾಗಿ ಹಚ್ಚಬೇಕು. ಇನ್ನೊಂದು ಕೆಸುವಿನ ಎಲೆಯನ್ನು ಅದರ ಮೇಲಿಟ್ಟು ಅದಕ್ಕೂ ಹಚ್ಚಬೇಕು. ಹೀಗೆ ಐದಾರು ಎಲೆಗಳನ್ನು ಮೇಲಿಂದ ಮೇಲೆ ಇಟ್ಟು ಮಸಾಲೆ ಹಚ್ಚಿ, ಕೊನೆಗೆ ಸುತ್ತಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಬೇಕು. ಬೆಂದ ನಂತರ ರೌಂಡ್ ಆಕಾರದಲ್ಲಿ ಕಟ್ ಮಾಡಿ, ತುಪ್ಪ ಹಚ್ಚಿ ಕಾವಲಿಯಲ್ಲಿ ಎರಡು ಬದಿ ಕಾಯಿಸಿದರೆ ರುಚಿಕರವಾದ ಪತ್ರೊಡೆ ಸಿದ್ಧವಾಗುತ್ತದೆ.

Comments

Leave a Reply

Your email address will not be published. Required fields are marked *