ಕೃಷ್ಣ ಮಠದ ಫಲಕದಲ್ಲಿ ಕನ್ನಡ ಕಾಣೆ – ಸಂಸ್ಕೃತ, ತುಳು ಪ್ರತ್ಯಕ್ಷ

– ಕನ್ನಡಾಭಿಮಾನಿ ಮಠದ ಭಕ್ತರಿಗೆ ಬೇಸರ

ಉಡುಪಿ: ಕೇಂದ್ರ ಸರ್ಕಾರ ರಾಜ್ಯದ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪದ ನಡುವೆಯೇ ಉಡುಪಿ ಕೃಷ್ಣಮಠದಲ್ಲಿ ಕನ್ನಡ ಮಾಯವಾಗಿದೆ. ಉಡುಪಿ ಶ್ರೀಕೃಷ್ಣಮಠದ ಮಹಾದ್ವಾರದಲ್ಲಿ ಹಾಕಲಾದ ಫಲಕದಲ್ಲಿ ಕನ್ನಡ ಕಾಣೆಯಾಗಿದೆ.

ಈ ಹಿಂದೆ ಕೃಷ್ಣಮಠದ ಮುಖ್ಯ ಮಹಾದ್ವಾರದಲ್ಲಿ ಕನ್ನಡದಲ್ಲಿ ಕೃಷ್ಣಮಠ ಎಂಬ ದೊಡ್ಡ ಫಲಕವನ್ನು ಹಾಕಲಾಗಿತ್ತು. ಈಗ ಉಡುಪಿಯಲ್ಲಿ ಅದಮಾರು ಮಠದ ಪರ್ಯಾಯ ನಡೆಯುತ್ತಿದೆ. ಮಠವನ್ನು ನವೀಕರಣ ಮಾಡುವ ಜೊತೆಗೆ ಕನ್ನಡದ ಬೋರ್ಡು ಕಳಚಿ ಹೊಸ ಬೋರ್ಡ್ ಅಳವಡಿಸಿದ್ದಾರೆ.

ಹೊಸ ಫಲಕದಲ್ಲಿ ಕನ್ನಡ ಕಾಣೆಯಾಗಿದೆ. ತುಳು ಮತ್ತು ಸಂಸ್ಕೃತದಲ್ಲಿ ಶ್ರೀಕೃಷ್ಣಮಠ ಎಂದು ಬರೆಯಲಾಗಿದೆ. ಶ್ರೀಕೃಷ್ಣಮಠ ರಜತಪೀಠ ಪುರ ಎಂದು ತುಳುವಿನಲ್ಲೂ, ಶ್ರೀಕೃಷ್ಣಮಠ ರಜತಪೀಠ ಪುರಂ ಎಂದು ಸಂಸ್ಕೃತದಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಕೃಷ್ಣ ಮಠದ ಫಲಕದಲ್ಲಿ ಕನ್ನಡ ಮಾಯ – ಪರ್ಯಾಯ ಅದಮಾರು ಮಠದಿಂದ ಸ್ಪಷ್ಟನೆ

ಈ ಬಗ್ಗೆ ಕನ್ನಡ ಅಭಿಮಾನಿಗಳು ಮಠದ ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಕೃಷ್ಣಮಠದಲ್ಲಿ ಕನ್ನಡಕ್ಕೆ ಕಿಮ್ಮತ್ತು ಇಲ್ಲವೇ ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

 

Comments

Leave a Reply

Your email address will not be published. Required fields are marked *