ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ- ರಾಯಚೂರಿನಲ್ಲಿ ಹೆಚ್ಚಿದ ಪ್ರವಾಹ ಭೀತಿ

ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚು ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ರಾಯಚೂರಿನ ದೇವದುರ್ಗದ ಕೊಪ್ಪರ ಲಕ್ಷ್ಮೀ ನರಸಿಂಹ ದೇವಾಲಯ ಭಾಗಶಃ ಜಲಾವೃತವಾಗಿದ್ದು ಸಂಜೆಯ ವೇಳೆಗೆ ದೇವಾಲಯ ಸಂಪೂರ್ಣ ಜಲಾವೃತ ಭೀತಿ ಎದುರಾಗಿದೆ.

ದೇವಾಲಯ ಮೆಟ್ಟಿಲುವರಗೆ ನದಿ ನೀರು ಬಂದಿದ್ದು ದೇವಾಲಯ ಬಳಿಯೇ ವಾಸವಾಗಿರುವ ಕುಟುಂಬಗಳಿಗೆ ಪ್ರವಾಹ ಭೀತಿ ಉಂಟಾಗಿದೆ. ಜಲಾಶಯದಿಂದ ಹಂತ ಹಂತವಾಗಿ ಹೆಚ್ಚು ನೀರು ಬಿಡುವ ಮುನ್ಸೂಚನೆಯಿರುವ ಹಿನ್ನೆಲೆ ನದಿ ಪಾತ್ರದ ಗ್ರಾಮಗಳ ಜನರಲ್ಲಿ ಆತಂಕ ಹೆಚ್ಚಾಗಿದೆ.

ನಾರಾಯಣಪುರ ಜಲಾಶಯದಿಂದ 2.20 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆ ಸಾಧ್ಯತೆ ಹೆಚ್ಚಾಗಿದೆ. 2.25 ಲಕ್ಷ ಕ್ಯೂಸೆಕ್ ನೀರು ಬಂದಲ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಲಿದೆ. ಈಗಾಗಲೇ ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ಆರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ನದಿಯಲ್ಲಿ ಪ್ರವಾಹ ಭೀತಿ ಹೆಚ್ಚಾಗುತ್ತಿದ್ದಂತೆ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಲಿಂಗಸುಗೂರು ತಾಲೂಕಿನ ಚಿತ್ತಾಪುರ ಬಳಿ ಶವ ಪತ್ತೆಯಾಗಿದೆ. ಸುಮಾರು 75 ವರ್ಷದ ವೃದ್ದನ ಶವ ಪತ್ತೆಯಾಗಿದೆ. ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಹಿನ್ನೀರಿನ ದಡಕ್ಕೆ ಶವ ಬಂದಿದೆ ಎನ್ನಲಾಗಿದೆ.

ಲಿಂಗಸಗೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *