ಕೃಷಿ ಸಮ್ಮಾನ ಯೋಜನೆಗೆ ಬಿಎಸ್‍ವೈ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದಾರೆ: ಬಿ.ಸಿ.ಪಾಟೀಲ್

ಹಾವೇರಿ: ಕೃಷಿ ಸಮ್ಮಾನ ಯೋಜನೆಗೆ ಸಿಎಂ ಯಡಿಯೂರಪ್ಪ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಐವತ್ತು ಲಕ್ಷ ರೈತರಿಗೆ ಇದರ ಲಾಭ ಸಿಗಲಿದೆ. ಇವತ್ತು ಬೆಳಿಗ್ಗೆಯಿಂದಲೆ ರೈತರ ಖಾತೆಗೆ ಕೃಷಿ ಸಮ್ಮಾನ ಯೋಜನೆಯ ಹಣ ಜಮೆ ಆಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ ಬೆಳೆ ವ್ಯತ್ಯಾಸ ಸೇರಿದಂತೆ ಕೆಲವು ಸಮಸ್ಯೆಯಿಂದ ಬೆಳೆ ವಿಮೆ ಹಣ ಏನೂ ಬಂದಿರಲಿಲ್ಲ. ಮಂಗಳವಾರದಿಂದ ಸಂಪೂರ್ಣ ವಿಮೆ ಹಣ ರೈತರ ಖಾತೆಗೆ ಜಮೆ ಆಗಲಿದೆ. 2015-16ನೇ ಸಾಲಿನ 6 ಕೋಟಿಗೂ ಅಧಿಕ ಬೆಳೆ ವಿಮೆ ಹಣ ಬಾಕಿ ಉಳಿದಿತ್ತು. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ರೈತರಿಗೆ ಬೆಳೆ ವಿಮೆ ಹಣ ಬಂದಿರಲಿಲ್ಲ. ಸಮಸ್ಯೆ ಬಗೆಹರಿದು ಈಗ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಹೋಗಿದೆ ಎಂದರು.

ಕಾಳ ಸಂತೆಯಲ್ಲಿ ಯೂರಿಯಾ ಗೊಬ್ಬರ ಮಾರಾಟ ಮಾಡೋದು ತಪ್ಪು. ಯೂರಿಯಾ ಗೊಬ್ಬರಕ್ಕೆ ಲಿಂಕ್ ಮಾಡೋದು, ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಕಾಳ ಸಂತೆಯಲ್ಲಿ ಮಾರಾಟ ಮಾಡೋದು, ಕೃತಕ ಅಭಾವ ಸೃಷ್ಟಿಸೋರ ಮೇಲೆ ಲೈಸನ್ಸ್ ರದ್ದತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *