ಕುಡಿಯಲು 500 ರೂ. ಕೊಟ್ಟಿಲ್ಲವೆಂದು ಒನಕೆಯಿಂದ ಹೊಡೆದು ಪತ್ನಿ ಕೊಂದವ ಆತ್ಮಹತ್ಯೆ!

– ಮೂವರು ಮಕ್ಕಳು ಅನಾಥ

ಚಿಕ್ಕಬಳ್ಳಾಪುರ: ಮದ್ಯ ಸೇವನೆ ಮಾಡಲು 500 ರೂ. ಕೊಟ್ಟಿಲ್ಲವೆಂದು ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಆರೋಪಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆದಿನಾರಾಯಣಪ್ಪ ಆತ್ಮಹತ್ಯೆಗೆ ಶರಣಾದವ. ಈತ ಮೂರು ದಿನಗಳ ಹಿಂದೆಯಷ್ಟೇ ಪತ್ನಿ ರತ್ನಮ್ಮ(35)ನನ್ನು ಒನಕೆಯಿಂದ ಹೊಡೆದು ಹತ್ಯೆ ಮಾಡಿದ್ದನು. ಬಳಿಕ ಸ್ಥಳದಿಂದ ಪರಾರಿಯಾಗಿದ್ದನು. ಇದೀಗ ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತಕ್ಕೋ ಏನೋ ಕೆರೆಗೆ ಹಾರಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದೀಗ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಭದ್ರಂಪಲ್ಲಿ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಶವ ಕೆರೆಯಲ್ಲಿ ತೇಲಿ ಬರುತ್ತಿರುವುದನ್ನು ನೋಡಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೆರೆಯಿಂದ ಶವವನ್ನು ಮೇಲಕ್ಕೆತ್ತಿದ್ದಾರೆ. ನಂತರ ಸಂಬಂಧಿಕರಿಗೆ ಒಪ್ಪಿಸಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡಿದ್ದ ಆದಿನಾರಾಯಣಪ್ಪ ಮೂರು ದಿನಗಳ ಹಿಂದೆ ಬೆಳಗ್ಗೆ ಪತ್ನಿಗೆ 500 ರೂಪಾಯಿ ನೀಡಿದ್ದನು. ಮಧ್ಯಾಹ್ನ ವೇಳೆ ಕಂಠಪೂರ್ತಿ ಕುಡಿದು ಬಂದ ಆದಿನಾರಾಯಣಪ್ಪ ತಾನು ನೀಡಿದ ಹಣ ಹಿಂದಿರುಗಿಸುವಂತೆ ಕೇಳಿದ್ದಾನೆ. ರತ್ಮಮ್ಮ ಹಣ ನೀಡಲು ಒಪ್ಪದಿದ್ದಾಗ ಮನೆಯಲ್ಲಿದ್ದ ಒನಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ದಂಪತಿಗೆ ಮೂರು ಮಕ್ಕಳು ಇದ್ದು, ಇದೀಗ ಅವು ಅನಾಥವಾಗಿವೆ.

ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತಿಗಾಗಿ ಬಲೆ ಬೀಸಿದ್ದಾರೆ. ಈ ಮಧ್ಯೆ ಆರೋಪಿ ಪತ್ನಿಯನ್ನು ಕೊಲೆಗೈದದಂದೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಿದ್ದಾರೆ.

Comments

Leave a Reply

Your email address will not be published. Required fields are marked *