ಕುಡಿದ ಮತ್ತಲ್ಲಿ ಕೆಎಸ್ಆರ್‌ಟಿಸಿ ಬಸ್ ಚಾಲಕನ ಎಡವಟ್ಟು- ತಪ್ಪಿದ ಭಾರೀ ಅನಾಹುತ

ಬಾಗಲಕೋಟೆ: ಕುಡಿದ ಮತ್ತಲ್ಲಿ ಕೆಎಸ್ಆರ್‌ಟಿಸಿ ಬಸ್ ಚಾಲಕ ನಿಯಂತ್ರಣ ತಪ್ಪಿ ನೀರಿನ ಟ್ಯಾಂಕ್‍ಗೆ ಡಿಕ್ಕಿ ಹೊಡೆದು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಗುಳೇದಗುಡ್ಡ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ.

ಆಸಂಗಿ ಗ್ರಾಮದ ಜ್ಯೋತೆವ್ವ ಜಾರ್ಜ್ ಆಸಂಗಿ (36), ನವೀನ್ ರತ್ನಪ್ಪ ನಾಗರಾಳ (22) ಹಾಗೂ 8 ವರ್ಷದ ಬಾಲಕಿ ಗಾಯಾಳುಗಳು. ಗುಳೇದಗುಡ್ಡ ತಾಲೂಕಿನ ಮಂಗಳಗುಡ್ಡ ನಿವಾಸಿ ಪರಸಪ್ಪ ಶಿರಗುಪ್ಪಿ ಕುಡಿದು ಬಸ್ ಚಾಲನೆ ಮಾಡಿದ ಚಾಲಕ.

ಪರಸಪ್ಪ ಶಿರಗುಪ್ಪಿ ಮಂಗಳೂರಿನಿಂದ ವಲಸೆ ಕಾರ್ಮಿಕರನ್ನು ವಿಜಯಪುರಕ್ಕೆ ಬಿಟ್ಟು ಕೆಎಸ್ಆರ್‌ಟಿಸಿ ಬಸ್ ಸಮೇತ ತನ್ನ ಊರಿಗೆ ಹೊರಟಿದ್ದ. ಈ ವೇಳೆ ಕುಡಿದ ಮತ್ತಲ್ಲಿದ್ದ ಪರಸಪ್ಪ ನಿಯಂತ್ರಣ ತಪ್ಪಿ ನೀರಿನ ಟ್ಯಾಂಕ್‍ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಟ್ಯಾಂಕ್ ಬಳಿ ಇದ್ದ ಬಾಲಕಿ, ಯುವಕ ಹಾಗೂ ಮಹಿಳೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಮಹಿಳೆಯ ಜ್ಯೋತೆವ್ವ ಹಾಗೂ ಬಾಲಕಿ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‍ನಲ್ಲಿದ್ದ ಇನ್ನೋರ್ವ ಚಾಲಕ ಎಂ.ಸತೀಶ್ ಚಂದ್ರ ಕೂಡ ಮದ್ಯ ಸೇವಿಸಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗುಳೇದಗುಡ್ಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಬಸ್ ಹಾಗೂ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *