ಕಿಚ್ಚನ ಬರ್ತ್‍ಡೇಗೆ ವಿಶ್ ಮಾಡಿದ ‘ಮಾರಿಗುಡ್ಡದ ಗಡ್ಡಧಾರಿಗಳು’

ಇಂದು ಕಿಚ್ಚ ಸುದೀಪ್ ಅವರು ಹುಟ್ಟಿದ ದಿನ. ಅಭಿಮಾನಿಗಳ ಕಡೆಯಿಂದ, ನಾನಾ ದಿಕ್ಕುಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅದೇ ಖುಷಿಯಲ್ಲಿ ಅವರು ನಟಿಸಿರೋ ಫ್ಯಾಂಟಮ್ ಚಿತ್ರವೂ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಕಿಚ್ಚನಿಗೆ ‘ಮಾರಿಗುಡ್ಡದ ಗಡ್ಡಧಾರಿಗಳು’ ಡಿಫರೆಂಟಾಗೊಂದು ವಿಶ್ ಮಾಡಿದ್ದಾರೆ!

ಅಂದಹಾಗೆ ಮಾರಿಗುಡ್ಡದ ಗಡ್ಡಧಾರಿಗಳು ಅನ್ನೋದು ಸಿನಿಮಾವೊಂದರ ಟೈಟಲ್ಲು. ಕೇಳಿದಾಕ್ಷಣವೇ ನಿಗೂಢ ಕಂಟೆಂಟಿನ ಸುಳಿವು ಕೊಡುವಂತಿರೋ ಈ ಸಿನಿಮಾ ಪೋಸ್ಟರ್ ಡಿಸೈನರ್ ಆಗಿ ಹೆಸರು ಮಾಡಿರುವ ರಾಜೀವ್ ಚಂದ್ರಕಾಂತ್ ನಾಯ್ಕರ್ ಅವರ ಮೊದಲ ಕನಸು. ವಿಶೇಷ ಅಂದ್ರೆ ಕಿಚ್ಚನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಲೇ ಅವರು ಟೈಟಲ್ ಅನಾವರಣಗೊಳಿಸಿದ್ದಾರೆ. ಇದನ್ನೂ ಓದಿ: ಕಾಮಿಡಿ ಕಚಗುಳಿಯಲ್ಲಿ ಕೋಟಿಗೊಬ್ಬನ ಟೀಸರ್ ಔಟ್

ರಾಜೀವ್ ಚಂದ್ರಕಾಂತ್ ನಾಯ್ಕರ್ ಕ್ರಿಯೇಟಿವ್ ಪೋಸ್ಟರ್ ಡಿಸೈನರ್ ಆಗಿ ಚಿರಪರಿಚಿತರು. ಈ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ಪ್ರಧಾನ ಆಸಕ್ತಿಯಾಗಿರೋದು ಸಿನಿಮಾ ನಿರ್ದೇಶನ. ಹಲವಾರು ಪ್ರಸಿದ್ಧ ಧಾರಾವಾಹಿಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ರಾಜೀವ್ ಅನಿವಾರ್ಯತೆಗೆ ಬಿದ್ದು ಪೋಸ್ಟರ್ ಡಿಸೈನರ್ ಆಗಿದ್ದರು.

ಈ ಕ್ಷೇತ್ರದಲ್ಲಿಯೇ ಹೆಸರು ಮಾಡಿ ಸಾಕಷ್ಟು ಅವಕಾಶಗಳಿದ್ದಾಗಲೂ ಸಿನಿಮಾ ನಿರ್ದೇಶನ ಮಾಡಬೇಕೆಂಬ ಕನಸು ಮಾತ್ರ ಧುಮುಗುಡುತ್ತಲೇ ಇತ್ತು. ಅದಕ್ಕಾಗಿ ಅವರು ಕೊರೊನಾ ಕಾಲವನ್ನು ಸರಿಕಟ್ಟಾಗಿಯೇ ಬಳಸಿಕೊಂಡಿದ್ದಾರೆ. ಈ ಕಾಲಾವಧಿಯಲ್ಲಿ ಪಟ್ಟಾಗಿ ಕೂತು ಚೆಂದದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನ ಸಿದ್ಧಪಡಿಸಿಕೊಂಡಿದ್ದಾರೆ. ಇದೀಗ ಅದಕ್ಕೆ ಮಾರಿ ಗುಡ್ಡದ ಗಡ್ಡಧಾರಿಗಳು ಎಂಬ ಆಕರ್ಷಕ ಶೀರ್ಷಿಕೆಯೂ ನಿಕ್ಕಿಯಾಗಿದೆ.

ಈ ಹಿಂದೆ ಅಯ್ಯೋ ರಾಮ ಅಂತೊಂದು ಚಿತ್ರ ನಿರ್ಮಾಣ ಮಾಡಿದ್ದ ತ್ರಿವಿಕ್ರಮ ರಘು ಈ ಸಿನಿಮಾಕ್ಕೆ ಬಂಡವಾಳ ಹೂಡಲು ಮುಂದಾಗಿದ್ದಾರೆ. ಅವರಿಗೆ ಅಶೋಕ್ ಇಳಂತಿಲ ಮತ್ತು ಪ್ರಸನ್ನ ಪಾಟೀಲ್ ಸಾಥ್ ಕೊಟ್ಟಿದ್ದಾರೆ. ಇನ್ನುಳಿದಂತೆ ಮುಖ್ಯ ಪಾತ್ರಕ್ಕೆ ಹೊಸ ಹುಡುಗ ದಿಲೀಪ್ ಕುಮಾರ್ ಆಯ್ಕೆಯಾಗಿದ್ದಾರೆ. ಇನ್ನುಳಿದ ತಾರಾಗಣ, ತಾಂತ್ರಿಕ ವರ್ಗದ ಆಯ್ಕೆ ಕಾರ್ಯ ಚಾಲ್ತಿಯಲ್ಲಿದೆ.

ಕಾದಂಬರಿ, ಕನ್ನಡಿ, ಗಾಳಿಪಟ ಮುಂತಾದ ಸೀರಿಯಲ್‍ಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ರಾಜೀವ್, ನಾಗಾಭರಣ ಅವರ ಗರಡಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಆ ಅನುಭವಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಚೆಂದದ ಕಥೆಯನ್ನ ರೆಡಿ ಮಾಡಿಕೊಂಡಿದ್ದಾರಂತೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್ ಕೂಡಾ ಮುಗಿಸಿದೆ. ಇದೇ ಡಿಸೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾರಿಗುಡ್ಡದ ಗಡ್ಡಧಾರಿಗಳ ಬಗ್ಗೆ ಇನ್ನಷ್ಟು ರೋಚಕ ಸಂಗತಿಗಳು ಹೊರಬೀಳಲಿವೆ.

Comments

Leave a Reply

Your email address will not be published. Required fields are marked *