ಕಾರಿನಲ್ಲಿ ಹಸುಗಳ ಸಾಗಾಟ- ಪೊಲೀಸರಿಂದ ಗಾಳಿಯಲ್ಲಿ ಗುಂಡು

-ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಸಲು ಆರೋಪಿಗಳು ಯತ್ನ

ಮಂಗಳೂರು: ಅಕ್ರಮ ಗೋಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬೆನ್ನಟ್ಟಿ ಹೋದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಮೂಡುಕೊಣಾಜೆ ಎಂಬಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ ಗೋಕಳ್ಳರು ಮೂಡುಬಿದ್ರೆಯ ಶಿರ್ತಾಡಿಯಿಂದ 6 ಗೋವುಗಳನ್ನು ರಿಟ್ಸ್ ಕಾರಿನಲ್ಲಿ ತುಂಬಿಸಿಕೊಂಡು ಹೋಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಮೂಡಬಿದ್ರೆ ಠಾಣೆಯ ಇನ್‍ಸ್ಪೆಕ್ಟರ್ ಬಿ.ಎಸ್.ದಿನೇಶ್ ಕುಮಾರ್ ತಂಡ ಆರೋಪಿಗಳು ಹಸುಗಳನ್ನು ಸಾಗಿಸುತ್ತಿದ್ದ ರಿಟ್ಸ್ ಕಾರನ್ನು ಹಿಂಬಾಲಿಸಿಕೊಂಡು ಹೋದರು. ಈ ವೇಳೆ ಆರೋಪಿಗಳು ಪೊಲೀಸ್ ಜೀಪ್ ಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದು, ಇನ್‍ಸ್ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಇದರಿಂದ ಹೆದರಿದ ಆರೋಪಿಗಳು ಕಾರ್ ಹಾಗೂ ಹಸುಗಳನ್ನು ಅಲ್ಲೇ ಬಿಟ್ಟು ಓಡಿ ಪರಾರಿಯಾಗಿದ್ದಾರೆ. ಕಾರು ಹಾಗೂ ಹಸುಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *