ಕಾರವಾರದಲ್ಲಿ 123 ಮಕ್ಕಳಿಗೆ ಟ್ಯಾಬ್ ವಿತರಣೆ- ಪ್ರತಿ ಶಾಲೆಗೊಂದು ವೃಕ್ಷ ಸಂಕಲ್ಪ

ಕಾರವಾರ: ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿ.ವಿ ಮತ್ತು ರೋಟರಿ ಸಹಯೋಗದೊಂದಿಗೆ ‘ಜ್ಞಾನ ದೀವಿಗೆ’ ಕಾರ್ಯಕ್ರಮದಡಿ ಕಾರವಾರ, ಅಂಕೋಲಾ, ಕುಮಟಾ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಲಾಯಿತು. ಅಲ್ಲದೆ ಶಾಲೆಗಳಿಗೆ ಸಸಿ ನೀಡುವ ಪರಿಸರ ಕಾಳಜಿ ಕಾರ್ಯಕ್ರಮಕ್ಕೆ ಇದೇ ವೇಳೆ ಚಾಲನೆ ನೀಡಲಾಯಿತು.

ಜಿಲ್ಲಾ ರಂಗಮಂದಿರದಲ್ಲಿ ಇಂದು ಕಾರ್ಯಕ್ರಮ ನಡೆದಿದ್ದು, ಕಾರವಾರ- ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ.ಎಸ್.ನಾಯ್ಕ, ಶಿರಸಿಯ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ದೇಣಿಗೆ ನೀಡಿದ್ದು, ಒಟ್ಟು ಏಳು ಶಾಲೆಯ 123 ಮಕ್ಕಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಉದ್ಘಾಟನೆ ಹಾಗೂ ಟ್ಯಾಬ್ ವಿತರಣೆಯನ್ನು ದಾನಿಗಳಾದ ಕಾರವಾರ- ಅಂಕೋಲ ಶಾಸಕಿ ರೂಪಾಲಿ.ಎಸ್.ನಾಯ್ಕ ಮಾಡಿದರು. ಟ್ಯಾಬ್ ದಾನಿಗಳಾದ ಶ್ರೀನಿವಾಸ್ ಹೆಬ್ಬಾರ್ ಅವರು ಕುಮಟಾ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಉ.ಕ.ಸಹಕಾರ ಮೀನುಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ, ಶಿಕ್ಷಣ ಇಲಾಖೆಯ ಉತ್ತರ ಕನ್ನಡ ಜಿಲ್ಲೆಯ ಉಪ ನಿರ್ದೇಶಕ ಹರೀಶ್ ಗಾಂವ್ಕರ್, ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಶ್ರೀಕಾಂತ್ ಹೆಗಡೆ, ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ.ಎಂ ಉಪಸ್ಥಿತರಿದ್ದರು.

ಶಾಲೆಗೊಂದು ವೃಕ್ಷ ಅಭಿಯಾನ
ಪಬ್ಲಿಕ್ ಟಿವಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಪ್ರತಿ ಶಾಲೆಗಳಿಗೊಂದು ವೃಕ್ಷ ಎನ್ನುವ ಉದ್ದೇಶದಿಂದ ಇಂದು ಆಯ್ಕೆಯಾದ ಶಾಲೆಗಳಿಗೆ ಸಸಿಗಳನ್ನು ವಿತರಿಸಲಾಯಿತು. ಜೊತೆಗೆ ಜಿಲ್ಲಾ ರಂಗಮಂದಿರ ಸುತ್ತಲೂ ಆರು ಸಸಿಗಳನ್ನು ನೆಡುವುದರ ಜೊತೆಗೆ ಇವುಗಳ ಪೋಷಣೆಯ ಹೊಣೆಯನ್ನು ಪಬ್ಲಿಕ್ ಟಿವಿ ಕಾರವಾರ ತಂಡ ಹೊತ್ತುಕೊಂಡಿದ್ದು, ಪ್ರತಿ ಶಾಲೆಯಲ್ಲಿ ತಲಾ ಎರಡು ಗಿಡದಂತೆ ಅವುಗಳ ಪೋಷಣೆಯ ಹೊಣೆಯನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರು ವಹಿಸಿಕೊಂಡರು. ಈ ಮೂಲಕ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

Comments

Leave a Reply

Your email address will not be published. Required fields are marked *