ಕಾಮಾಲೆ ರೋಗದವರಿಗೆ ಕಾಣೋದೆಲ್ಲಾ ಹಳದಿ: ಕೈ ನಾಯಕರ ಮೇಲೆ ಸುಧಾಕರ್ ಕಿಡಿ

– ಖಾಸಗಿ ಆಸ್ಪತ್ರೆಗಳಿಗೆ ಪರೋಕ್ಷವಾಗಿ ವಾರ್ನಿಂಗ್
– ಕಾಂಗ್ರೆಸ್ಸಿನವರಿಗೆ ಹಗರಣಗಳು ಮಾಡಿ ಅಭ್ಯಾಸ

ಬೆಂಗಳೂರು: ಕಾಮಾಲೆ ರೋಗದವರಿಗೆ ಕಾಣುವುದೆಲ್ಲ ಹಳದಿ ಎಂದು ಹೇಳುವ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ಕಾಂಗ್ರೆಸ್ ನಾಯಕ ಮೇಲೆ ಕಿಡಿಕಾರಿದ್ದಾರೆ.

ಇಂದು ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಮೊಸರಿನಲ್ಲಿ ಕಲ್ಲು ಹುಡುಕುವುದು ಬಿಡಬೇಕು. ಇಲ್ಲ ಅಂದರೆ ನಾನು ಬಾಯಿ ಬಿಡಬೇಕಾಗುತ್ತೆ. ಯಾರು ಎಲ್ಲೆಲ್ಲಿ ಹೋಗಿದ್ದರು ಯಾರು ಎಲ್ಲಿ ಲೂಟಿ ಮಾಡಿದರು ಅನ್ನೋದು ನನಗೆ ಗೊತ್ತಿದೆ. ಇದನ್ನು ನಾನು ಈಗ ಬಾಯಿ ಬಿಡಬೇಕಾಗುತ್ತದೆ. ಕಾಂಗ್ರೆಸ್ಸಿನವರಿಗೆ ಹಗರಣಗಳು ಮಾಡಿ ಅದೇ ಅಭ್ಯಾಸ ಎಂದರು.

ಇದೇ ವೇಳೆ ಪಿಪಿಇ ಕಿಟ್ ವಿಚಾರದಲ್ಲಿ ಹಗರಣದ ನಡಿದಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸುಧಾಕರ್, ಆರೋಗ್ಯ ಇಲಾಖೆಯವರು ಈ ವಿಚಾರದಲ್ಲಿ ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡಿದ್ದಾರೆ. ಡಾ. ಮಂಜುನಾಥ್ ಅವರು ಇದನ್ನು ಶಿಫಾರಸು ಮಾಡಿದ್ದಾರೆ. ಸತ್ಯಾಸತ್ಯತೆ ತಿಳಿದು ಆರೋಪ ಮಾಡಲಿ ಎಂದು ಸಿದ್ದರಾಮಯ್ಯ ಅವರಿಗೆ ತೀರುಗೇಟು ನೀಡಿದರು.

ಖಾಸಗಿ ಆಸ್ಪತ್ರೆಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಸುಧಾಕರ್ ಅವರು, ಬೆಂಗಳೂರಲ್ಲಿ ಸಾಕಷ್ಟು ಕೊರೊನಾ ರಿಪೋರ್ಟ್ ಪೆಂಡಿಗ್ ಇವೆ. ಈ ವಿಚಾರದಲ್ಲಿ ಖಾಸಗಿ ಲ್ಯಾಬ್‍ಗಳು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಕರಿಸಿಲ್ಲ. ಹೀಗಾಗಿ ಎಲ್ಲ ಲೋಡ್ ಸರ್ಕಾರಿ ಲ್ಯಾಬ್‍ಗಳ ಮೇಲೆ ಬಿದ್ದ ಪರಿಣಾಮ ರಿಪೋರ್ಟ್ ವಿಳಂಬವಾಗಿದೆ. ಕೋಲಾರದ ಮೆಡಿಕಲ್ ಕಾಲೇಜಲ್ಲಿ ಕೇವಲ 30 ಕೊರೊನಾ ಟೆಸ್ಟ್ ಮಾಡಿದ್ದಾರೆ. ಅದೇ ರೀತಿ ರಾಜ್ಯದ ನಾನಾ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಇದೇ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿವೆ. ಖಾಸಗಿ ಮೆಡಿಕಲ್ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳುತ್ತೇವೆ. ರಾಜ್ಯದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಲ್ಯಾಬ್‍ಗಳು ಅಲಂಕಾರಕ್ಕೆ ಇರೋದು ಬೇಡ ಎಂದರು.

ಲ್ಯಾಬ್ ಇದ್ದ ಮೇಲೆ ಟೆಸ್ಟ್ ಗಳನ್ನು ಮಾಡಲೇಬೇಕು. ಪ್ರತಿ ಟೆಸ್ಟ್‍ಗೂ ಸರ್ಕಾರದಿಂದ ಒಂದು ಟೆಸ್ಟ್‍ಗೆ 2250 ರೂ. ನಂತೆ ಹಣ ಕೊಡುತ್ತೇವೆ. ನಾವೇ ಸ್ಯಾಂಪಲ್ ಕೊಟ್ಟು ನಾವೇ ದುಡ್ಡು ಸಹ ಕೊಡುತ್ತೇವೆ. ಅದರೂ ಕೆಲ ಖಾಸಗಿ ಸಂಸ್ಥೆಗಳು ನಮಗೆ ಸಹಕರಿಸುತ್ತಿಲ್ಲ. ಹೀಗಾಗಿ ಅಂತಹವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳುತ್ತೇವೆ. ಕೊರೊನಾ ವಿಚಾರದಲ್ಲಿ ಖಾಸಗಿ ಸಂಸ್ಥೆಗಳ ಸಹಕಾರ ಸಿಕ್ಕಲ್ಲ. ಆದರೆ ಅವರನ್ನು ಸರಿ ದಾರಿಗೆ ತರುವುದು ಸರ್ಕಾರಕ್ಕೆ ಗೊತ್ತಿದೆ ತರುತ್ತೇವೆ ಎಂದು ಸುಧಾಕರ್ ಎಚ್ಚರಿಕೆ ನೀಡಿದರು.

Comments

Leave a Reply

Your email address will not be published. Required fields are marked *