ಕಾಫಿ ನಾಡಲ್ಲಿ ಮಳೆ ಅಬ್ಬರ- ಒಂದೇ ಗಂಟೆಗೆ 20 ಮಿ.ಮೀ ಮಳೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಒಂದೇ ಗಂಟೆಗೆ ಸುಮಾರು 20 ಮಿ.ಮೀ.ನಷ್ಟು ಮಳೆ ಸುರಿದಿದೆ. ಇದರಿಂದಾಗಿ ಮಲೆನಾಡಿಗರು ಮತ್ತೆ ಆತಂಕಕ್ಕೀಡಾಗಿದ್ದಾರೆ.

ಸುಮಾರು ಒಂದು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಜನ ಹೈರಾಣಾಗಿದ್ದಾರೆ. ಜಿಲ್ಲೆಯ ಕಳಸ ತಾಲೂಕಿನ ಇಡಕಣಿ, ಹೆಮ್ಮನೆ, ಬಾಳೆಹೊಳೆ, ಹಿರೇಬೈಲು, ಕೆಳಭಾಗ ಸೇರಿದಂತೆ ಸುತ್ತಮುತ್ತ ಭಾರೀ ಮಳೆ ಸುರಿದಿದೆ. ಕಾಫಿ, ಅಡಿಕೆ ತೋಟದಲ್ಲಿ ಕೆಲಸ ಮಾಡಿಸುತ್ತಿದ್ದ ತೋಟದ ಮಾಲೀಕರು ಮಳೆ ಕಂಡು ಅರ್ಧಕ್ಕೆ ಕೆಲಸ ನಿಲ್ಲಿಸಿದ್ದಾರೆ. ಕಾರ್ಮಿಕರೂ ಕೂಡ ಮಳೆ ಕಂಡು ಕೆಲಸ ನಿಲ್ಲಿಸಿ ಮನೆ ಸೇರಿದ್ದಾರೆ.

ಒಂದು ಗಂಟೆಯಲ್ಲಿ ಸುಮಾರು 20 ಮಿ.ಮೀ.ನಷ್ಟು ಮಳೆ ಸುರಿದಿದೆ. ನೋಡನೋಡುತ್ತಿದ್ದಂತೆ ದಿಢೀರ್ ಆರಂಭವಾದ ಮಳೆ ಕಂಡು ಜನ ಕಳೆದ ಎರಡು ವರ್ಷವೂ ಮಳೆರಾಯ ನಮ್ಮ ಬದುಕನ್ನ ಬರಡಾಗಿಸಿದ್ದಾನೆ. ಈ ವರ್ಷ ಇನ್ನೇನು ಅವಾಂತರ ಸೃಷ್ಠಿಸುತ್ತಾನೋ ಎಂದು ಆತಂಕಕ್ಕೀಡಾಗಿದ್ದಾರೆ. ಕಳೆದೊಂದು ವರ್ಷದಿಂದಲೂ ಮಲೆನಾಡಲ್ಲಿ ಆಗ್ಗಾಗ್ಗೆ ನಿರಂತರ ಮಳೆ ಸುರಿದಿದೆ. ಇದರಿಂದ ಈಗಾಗಲೇ ಕಾಫಿ, ಮೆಣಸು, ಅಡಿಕೆ ಸೇರಿದಂತೆ ಬಹುತೇಕ ವಾಣಿಜ್ಯ ಹಾಗೂ ಆಹಾರ ಬೆಳೆ ಕೂಡ ನೀರು ಪಾಲಾಗಿತ್ತು.

Comments

Leave a Reply

Your email address will not be published. Required fields are marked *