ಕಾಫಿನಾಡ ಏಕೈಕ ಕಾರ್ಖಾನೆಗೆ ಬೀಗ- ಕಾರ್ಮಿಕರು ಅತಂತ್ರ

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದ್ದ ಕಾಫಿನಾಡ ಏಕೈಕ ಕಾರ್ಖಾನೆ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್‍ಗೆ ಬೀಗ ಬೀಳುವ ಕಾಲ ಸನ್ನಿಹಿತವಾಗಿದ್ದು, ಕಾರ್ಖಾನೆಯನ್ನು ನೆಚ್ಚಿಕೊಂಡು ನಾಲ್ಕೈದು ದಶಕಗಳಿಂದ ಬದುಕು ಕಟ್ಟಿಕೊಂಡಿದ್ದ ಕಾರ್ಮಿಕರ ಪರಿಸ್ಥಿತಿ ಅತಂತ್ರವಾಗಿದೆ.

ಪ್ರಸ್ತುತ ಕಾರ್ಖಾನೆಯಲ್ಲಿ 60 ಜನ ಪರ್ಮೆಂಟ್ ಉದ್ಯೋಗಿಗಳು, 12 ಜನ ಟ್ರೈನಿಸ್, 10 ಆಫೀಸರ್ಸ್ ಸೇರಿದಂತೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ 180 ಕಾರ್ಮಿಕರು ಕಾರ್ಖಾನೆಯಿಂದ ಬದುಕು ಕಟ್ಟಿಕೊಂಡಿದ್ದರು. ಆದರೀಗ ಕಾರ್ಖಾನೆಗೆ ಬೀಗ ಬೀಳುತ್ತೆಂದು ನೌಕರರು ಕಂಗಾಲಾಗಿದ್ದಾರೆ. ಕಂಪನಿಯನ್ನು ಅವಲಂಬಿಸಿ 20ಕ್ಕೂ ಹೆಚ್ಚು ಫೆಲ್ಟಿಂಗ್ ಅಂಗಡಿಗಳೂ ಇವೆ. ಈಗ ಕಂಪನಿಗೆ ಬೀಗ ಬೀಳುತ್ತೆಂದು ಎಲ್ಲರೂ ಅತಂತ್ರರಾಗಿದ್ದಾರೆ.

1984ನೇ ಇಸವಿಯಿಂದಲೂ ಕೂಡ ನೌಕರರು ಈ ಕಾರ್ಖಾನೆಯನ್ನು ಬೆಮೆಲ್ ಕಂಪನಿ ಜೊತೆ ವೀಲಿನ ಮಾಡಿಕೊಳ್ಳುವಂತೆ ನೌಕರರು ಮನವಿ ಹಾಗೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ದಿ.ಸಂಸದ ಡಿ.ಸಿ.ಶ್ರೀಕಂಠಪ್ಪ ಕೂಡ ಕಾರ್ಖಾನೆಯನ್ನ ಬೆಮೆಲ್‍ಗೆ ಸೇರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. 1992ರಿಂದ ಕಾರ್ಖಾನೆ ಸಾಕಷ್ಟು ಲಾಭ ಕಂಡಿತ್ತು. ಟ್ಯಾಕ್ಸ್ ಪೇ ಮಾಡ್ತಿದ್ದ ಸಂಸ್ಥೆ 2003ರಲ್ಲಿ ಬಿ.ಎಫ್.ಆರ್ ನಿಂದ ಹೊರಕ್ಕೆ ಬಂದಿತ್ತು. 2017-18ನೇ ಇಸವಿಯಲ್ಲೂ ಕಾರ್ಖಾನೆಗೆ ಸಾಕಷ್ಟು ಲಾಭ ಬಂದಿತ್ತು. ಈ ಕಾರ್ಖಾನೆಯನ್ನ ಸಬ್ಸಿಟ್ಯೂಟ್ ಆಗಿ ಇಟ್ಟುಕೊಂಡಿದ್ದ ಬೆಮೆಲ್‍ಗೆ ಕೇಂದ್ರ ಸರ್ಕಾರದ ನೀತಿ ಆಯೋಗ ಬೆಮೆಲ್‍ಗೆ ವಿಜ್ಞಾನ ಇಂಡಸ್ಟ್ರೀಸ್‍ನ ಮರ್ಜ್ ಮಾಡಿಕೊಳ್ಳುವಂತೆ ಸೂಚಿಸಿತ್ತು.

ಆದರೆ ಬೆಮಲ್ ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಈ ಕಾರ್ಖಾನೆಯನ್ನು ಮರ್ಜ್ ಮಾಡಿಕೊಳ್ಳದ ಬೆಮೆಲ್, ಪ್ರೈವೈಟೈಸ್ ಮಾಡಲು ಟೆಂಡರ್ ಕೂಡ ಕರೆದಿತ್ತು. ಆದರೆ ಟೆಂಡರ್ ಪಡೆಯಲು ಯಾರೂ ಮುಂದೆ ಬಾರದ ಹಿನ್ನೆಲೆ ಇದೀಗ ಈ ಕಾರ್ಖಾನೆಗೆ ಬೀಗ ಬೀಳುವ ಕಾಲ ಸನ್ನಿತವಾಗಿದ್ದು ನೌಕರರು ಅತಂತ್ರಕ್ಕೀಡಾಗಿದ್ದಾರೆ. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ, ನೌಕರರ ನೋವನ್ನ ಅರಿತು, ಕಾರ್ಖಾನೆಯನ್ನ ಬೆಮೆಲ್‍ಗೆ ಮರ್ಜ್ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ಕಾಫಿನಾಡಿಗರು ಕೂಡ ಜಿಲ್ಲೆಯಲ್ಲಿರೋ ಏಕೈಕ ಕಾರ್ಖಾನೆಯನ್ನ ಉಳಿಸಿಬೇಕೆಂದು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *