ಕಾಂಗ್ರೆಸ್ ಕಚೇರಿ ಮೇಲೆ ಐಟಿ ದಾಳಿ- 8.5 ಲಕ್ಷ ವಶಕ್ಕೆ

– ಕಚೇರಿಯ ಆವರಣದಲ್ಲಿ ನಿಲ್ಲಿಸಿದ ಕಾರಿನಲ್ಲಿ ಹಣ ಪತ್ತೆ
– ಚುನಾವಣೆ ಹೊತ್ತಲ್ಲೇ ಐಟಿ ದಾಳಿ

ಪಾಟ್ನಾ: ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಬಿಹಾರದ ಕಾಂಗ್ರೆಸ್ ಪ್ರಧಾನ ಕಚೇರಿ ಸದಾಕತ್ ಆಶ್ರಮದ ಮೇಲೆ ಆದಾಯ ತೆರಿಗೆ ಅಧಿಕಾರಿ(ಐಟಿ)ಗಳು ದಾಳಿ ನಡೆಸಿದ್ದು, ಕಚೇರಿಯ ಆವರಣದ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 8.5 ಲಕ್ಷ ರೂ.ಪತ್ತೆಯಾಗಿದೆ.

ಪಾಟ್ನಾದಲ್ಲಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತ ಎಂದು ನಂಬಲಾದ ಅಶುತೋಷ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಕಾರಿನಲ್ಲಿದ್ದ 8.5 ಲಕ್ಷ ರೂ.ಹಣವನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಕಚೇರಿಯಲ್ಲಿ ಹಣ ಪತ್ತೆಯಾದ ಕುರಿತು ಬಿಹಾರ್ ಕಾಂಗ್ರೆಸ್ ಇನ್‍ಚಾರ್ಜ್ ಶಕ್ತಿ ಸಿಂಗ್ ಗೋಹಿಲ್ ಹಾಗೂ ರಾಷ್ಟ್ರೀಯ ಮಿಡಿಯಾ ಇನ್‍ಚಾರ್ಜ್ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಸದಾಕತ್ ಆಶ್ರಮದ ಮೇಲೆ ನಡೆದ ಐಟಿ ದಾಳಿಯನ್ನು ಶಕ್ತಿ ಸಿಂಗ್ ಗೋಹಿಲ್ ಅವರು ಖಂಡಿಸಿದ್ದು, ಕಾಂಗ್ರೆಸ್ ತಪ್ಪು ಮಾಡುತ್ತಿದೆ ಎಂಬುದನ್ನು ಬಿಂಬಿಸಲು ಈ ರೀತಿ ಮಾಡಲಾಗುತ್ತಿದೆ. ಬಿಜೆಪಿ-ಜೆಡಿಯು ಸರ್ಕಾರದ ಸೂಚನೆ ಮೇರೆಗೆ ಐಟಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಬಿಹಾರ ಚುನಾವಣೆಯಲ್ಲಿ ನಾವು ಸೋಲುತ್ತೇವೆ ಎಂಬುದು ಬಿಜೆಪಿ-ಜೆಡಿಯುಗೆ ತಿಳಿದಿದೆ. ಹೀಗಾಗಿ ಈ ರೀತಿಯ ಕೆಲಸ ಮಾಡುತ್ತಿದೆ. ಯಾರ ಕಾರಿನಿಂದ ಹಣ ವಶಪಡಿಸಿಕೊಳ್ಳಲಾಗಿದೆಯೋ ಅವರು ನಮಗೆ ಸಂಬಂಧವಿಲ್ಲ. ಹಣ ಹಾಗೂ ಕಾರು ಯಾರಿಗೆ ಸೇರಿದ್ದು ಎಂಬುದು ಸಹ ನಮಗೆ ತಿಳಿದಿಲ್ಲ ಎಂದು ಶಕ್ತಿ ಸಿಂಗ್ ಗೋಹಿಲ್ ಹೇಳಿದ್ದಾರೆ. ಅತ್ತ ಈ ದಾಳಿಯನ್ನು ಐಟಿ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

Comments

Leave a Reply

Your email address will not be published. Required fields are marked *