ಕಾಂಗ್ರೆಸ್ ಉಳಿಸಲು ಯಾರಿಂದಲೂ ಸಾಧ್ಯವಿಲ್ಲ: ಶಿವರಾಜ್ ಸಿಂಗ್ ಚೌವ್ಹಾಣ್

– ಕಾಂಗ್ರೆಸ್ ವಿರುದ್ಧ ಮಾತಾಡಿದ್ರೆ ಬಿಜೆಪಿ ಜೊತೆ ಶಾಮೀಲು ಅಂತಾರೆ

ಭೋಪಾಲ್: ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗದ್ದಲ, ಗುಂಪುಗಾರಿಕೆ ಉಂಟಾಗಿರುವುದು ಭಾರೀ ಚರ್ಚೆ ಕಾರಣವಾಗಿದೆ. ಮಾತ್ರವಲ್ಲ ಸಭೆಯಲ್ಲಿ ಪಕ್ಷದ ನಾಯಕತ್ವದ ಕುರಿತು ಮಾತನಾಡಿದವರಿಗೆ ಬಿಜೆಪಿ ಜೊತೆ ಒಡನಾಟ ಹೊಂದಿದ್ದಾರೆ ಎಂದು ಸಹ ಹೇಳಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಭೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ಧ್ವನಿ ಎತ್ತುತ್ತಿದ್ದಂತೆ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ನಂತರ ಗುಲಾಮ್ ನಬಿ ಆಝಾದ್ ಹಾಗೂ ಕಪಿಲ್ ಸಿಬಲ್ ಅವರು ಪೂರ್ಣಾವಧಿ ಅಧ್ಯಕ್ಷರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು. ಅವರೂ ಸಹ ಬಿಜೆಪಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇಂತಹ ಪಕ್ಷವನ್ನು ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಜೀ ನೀವು ತಪ್ಪು ಮಾಡಿದ್ದೀರಿ: ರಮ್ಯಾ

ಬಿಜೆಪಿ ನಾಯಕಿ ಉಮಾ ಭಾರತಿ ಸಹ ಈ ಕುರಿತು ಕಿಡಿಕಾರಿದ್ದು, ಪಕ್ಷದ ರಾಜಕೀಯ ಪ್ರಾಬಲ್ಯ ಮುಗಿದಿದೆ. ಗಾಂಧಿ-ನೆಹರು ಕುಟುಂಬದ ಅಸ್ತಿತ್ವವು ಬಿಕ್ಕಟ್ಟಿನಲ್ಲಿದೆ. ಅವರ ರಾಜಕೀಯ ಪ್ರಾಬಲ್ಯ ಮುಗಿದಿದೆ, ಕಾಂಗ್ರೆಸ್ ಕಥೆ ಸಹ ಮುಗಿದಿದೆ. ಹೀಗಿರುವಾಗ ಯಾರು ಯಾವ ಸ್ಥಾನದಲ್ಲಿರುತ್ತಾರೆ ಎಂಬುದು ಈಗ ಮುಖ್ಯವಲ್ಲ. ಅಲ್ಲದೆ ಕಾಂಗ್ರೆಸ್ ಯಾವುದೇ ವಿದೇಶಿ ಅಂಶವಿಲ್ಲದೆ, ನಿಜವಾದ ಸ್ವದೇಶಿ ಮಾದರಿಗೆ ಮರಳಬೇಕಿದೆ ಎಂದು ಟಾಂಗ್ ನೀಡಿದ್ದಾರೆ.

ಝೂಮ್ ಆ್ಯಪ್ ಮೂಲಕ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷರ ಆಯ್ಕೆ ಕುರಿತು ಭಾರೀ ಚರ್ಚೆ ನಡೆದಿದ್ದು, ಈ ವೇಳೆ ಭಿನ್ನಾಭಿಪ್ರಾಯ ಸಹ ಉಂಟಾಗಿದೆ. ಪೂರ್ಣಾವಧಿಯ ಅಧ್ಯಕ್ಷರನ್ನು ನೇಮಿಸಬೇಕು ಎಂದು ಹೇಳಿದ ನಾಯಕರು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಅಲ್ಲದೆ ಪತ್ರ ಚಳುವಳಿ ನಡೆಸಿದ 20 ಕಾಂಗ್ರೆಸ್ ನಾಯಕರ ವಿರುದ್ಧ ಸಹ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾ, ಕಪಿಲ್ ಸಿಬಲ್ ಸೇರಿ ಹಲವು ನಾಯಕರ ವಿರುದ್ಧ ಬಿಜೆಪಿಯೊಂದಿಗೆ ಒಡನಾಟ ಹೊಂದಿರುವ ಆರೋಪ ಹೊರಿಸಲಾಗಿದೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *