ಕಲ್ಲಂಗಡಿ ಕೊಳ್ಳೋರಿಲ್ಲ, ಸೂಕ್ತ ಮಾರುಕಟ್ಟೆ ಕಲ್ಪಿಸಿ- ಸಿಎಂಗೆ ರೈತನ ಮನವಿಯ ವಿಡಿಯೋ ವೈರಲ್

ಚಾಮರಾಜನಗರ: ಕಲ್ಲಂಗಡಿ ಕೊಳ್ಳುವವರಿಲ್ಲದೆ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ಗಡಿ ಜಿಲ್ಲೆ ಅನ್ನದಾತ ಸೂಕ್ತ ಮಾರುಕಟ್ಟೆ ಕಲ್ಪಿಸುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿಎಂ ಯಡಿಯೂರಪ್ಪ ಸರ್ಕಾರದ ನಡೆ ರೈತರ ಕಡೆ ಅಂತಾರೆ. ಆದರೆ ಇಲ್ಲಿಯವರೆಗೆ ಒಬ್ಬ ಅಧಿಕಾರಿಯೂ ಕೂಡ ರೈತರ ಕಷ್ಟ ಆಲಿಸುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಷ್ಟಪಟ್ಟು ಬೆಳೆದ ಕಲ್ಲಂಗಡಿ ಹಣ್ಣನ್ನು ಕೇಳುವವರಿಲ್ಲದೆ. ಮಣ್ಣು ಪಾಲಾಗುತ್ತಿದೆ. ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆದ್ದನಪಾಳ್ಯ ಗ್ರಾಮದಲ್ಲೇ ಹತ್ತಾರು ಎಕರೆ ಕಲ್ಲಂಗಡಿ ಬೆಳೆಯಲಾಗಿದೆ. ಆದರೆ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ ಎಂದು ದೂರಿದ್ದಾರೆ.a

ಕೊರೊನಾ ಹಿನ್ನೆಲೆ ಕೈಗೆ ಬಂದ ಕಲ್ಲಂಗಡಿ ಬೆಳೆಯನ್ನು ಯಾರೂ ಕೇಳದಂತಾಗಿದೆ. ತಮಿಳುನಾಡು-ಚಾಮರಾಜನಗರ ಜಿಲ್ಲಾ ಗಡಿಯ ಪೆದ್ದನಪಾಳ್ಯ ಗ್ರಾಮದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಸುಮಾರು 15 ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂ.ಖರ್ಚು ಮಾಡಿ ಕಷ್ಟಪಟ್ಟು ಬೆಳೆದಿರುವ ಕಲ್ಲಂಗಡಿ ಹಣ್ಣುಗಳು ಈಗ ನೆಲಕಚ್ಚಿವೆ.

ಕಟಾವಿಗೆ ಬಂದ ಕಲ್ಲಂಗಡಿ ಬೆಳೆಯನ್ನು ಕೊಂಡುಕೊಳ್ಳಲು ಯಾರು ಬರುತ್ತಿಲ್ಲ. ಮಾರುಕಟ್ಟೆ ವ್ಯವಸ್ಥೆಯೂ ಇಲ್ಲ, ಇದರಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಕಳೆದ ಬಾರಿ ಸಹ ಕಲ್ಲಂಗಡಿಯನ್ನು ಮಣ್ಣು ಪಾಲು ಮಾಡಲಾಗಿತ್ತು. ಈ ಬಾರಿ ಇಳುವರಿ ಹೆಚ್ಚು ಬಂದಿದ್ದು, ಹಾಳು ಮಾಡಲು ಮನಸ್ಸಾಗುತ್ತಿಲ್ಲ. ಹೀಗಾಗಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *