ಕರ್ಫ್ಯೂನಿಂದ ಮಾವು ಬೆಳೆಗಾರರಿಗೆ ಸಂಕಷ್ಟ- ಜ್ಯೂಸ್ ಕಂಪನಿಗಳಿಂದ ಕಡಿಮೆ ಬೆಲೆಗೆ ಖರೀದಿ

ಧಾರವಾಡ: ಕೊರೊನಾ ಕರ್ಫ್ಯೂನಿಂದ ರೈತರಿಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ, ರೈತರು ತಮ್ಮ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಬಹುದು ಎಂದು ಸರ್ಕಾರ ಹೇಳುತ್ತದೆ. ಆದರೆ ಇದೀಗ ಮಾವು ಬೆಳೆಗಾರರಿಗೆ ನಷ್ಟವಾಗುತ್ತಿದ್ದು, ಜ್ಯೂಸ್ ಕಂಪನಿಗಳು ಕಡಿಮೆ ಬೆಲೆಗೆ ಮಾವು ಖರೀದಿಸುತ್ತಿವೆ.

ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿ ಮಾಡಿದಾಗಿನಿಂದ ಮಾವು ಬೆಳಗಾರರಿಗೆ ಸಂಕಷ್ಟ ಎದುರಾಗಿದ್ದು, ಜಿಲ್ಲೆಯಿಂದ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿಗೆ ಅತೀ ಹೆಚ್ಚು ಮಾವು ಹೋಗುತ್ತೆ. ಆದರೆ ಕೊರೊನಾ ಕರ್ಫ್ಯೂ ಜಾರಿಯಾದಾಗಿನಿಂದ ಮಾವಿನ ಬೆಲೆ ಏಕಾಏಕಿ ಕುಸಿದಿದೆ.

ಕರ್ಫ್ಯೂಗಿಂತ ಮೊದಲು ಇದೇ ಮಾವು ಪ್ರತಿ ಕೆ.ಜಿಗೆ 35 ರೂಪಾಯಿಗೆ ಮಾರಾಟವಾಗುತಿತ್ತು. ಆದರೆ ಕರ್ಫ್ಯೂ ಜಾರಿಯಾದಾಗಿನಿಂದ ಪ್ರತಿ ಕೆ.ಜಿ.ಗೆ 25 ರೂಪಾಯಿಗೆ ಬೆಲೆ ಕುಸಿದಿದೆ. ಮಾವು ಹೆಚ್ಚು ದಿನಗಳ ಕಾಲ ಇಡಲು ಆಗುವುದಿಲ್ಲ, ಕೆಟ್ಟು ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅನಿವಾರ್ಯವಾಗಿ ಮಾವು ಬೆಳೆಗಾರರು ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ.

ಧಾರವಾಡದಿಂದ ಹೋಗುವ ಬಹುತೇಕ ಮಾವು ಜ್ಯೂಸ್ ಕಂಪನಿಗಳಿಗೇ ಹೋಗುತ್ತೆ. ಕರ್ಫ್ಯೂ ಜಾರಿಯಾಗಿದ್ದರಿಂದ ಜ್ಯೂಸ್ ಕಂಪನಿಯವರು ಅವಕಾಶ ಮಾಡಿಕೊಂಡಿದ್ದು, ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಕಳೆದ ವರ್ಷ ಸಹ ಇದೇ ರೀತಿ ಮಾವು ಬೆಳೆಗಾರರು ಲಾಕ್‍ಡೌನದಿಂದ ನಷ್ಟ ಅನುಭವಿಸಿದ್ದರು. ಈ ಬಾರಿ ಅದೇ ರೀತಿಯ ಸ್ಥಿತಿ ನಿರ್ಮಾಣವಾಗಿದೆ.

Comments

Leave a Reply

Your email address will not be published. Required fields are marked *