ಕರ್ನಾಟಕ ಸರ್ಕಾರದ ಗಮನ ಸೆಳೆಯಲು ವಿಶ್ವಾದ್ಯಂತ ಒಗ್ಗಟ್ಟಾದ ಅನಿವಾಸಿ ಕನ್ನಡಿಗರು

ಬೆಂಗಳೂರು: ಸತತ ಕೋರಿಕೆ, ಹಲವಾರು ಮನವಿಗಳ ನಂತರವೂ ಹಲವು ವರ್ಷಗಳಿಂದ ಕಡೆಗಣಿಸಲ್ಪಟ್ಟು, ಸ್ಪಂದನೆ ಸಿಗದೇ ಹೋದರೆ ಗಮನ ಸೆಳೆಯ ಬೇಕಾದರೆ ವಿಭಿನ್ನ ರೀತಿಯ ಪ್ರಯತ್ನ ಮಾಡಬೇಕಾಗುತ್ತದೆ. ಅಂತದ್ದೇ ಒಂದು ಪ್ರಯತ್ನಕ್ಕೆ ವಿಶ್ವದಾದ್ಯಂತ ಇರುವಂತಹ ಅನಿವಾಸಿ ಕನ್ನಡಿಗರು ಕೈಹಾಕಿದ್ದಾರೆ.

ಇದೇ ಮೊದಲ ಬಾರಿಗೆ ವಿಶ್ವದಾದ್ಯಂತವಿರುವ ಮೂವತ್ತಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಒಂದೇ ದಿನ ಒಂದೇ ಧ್ವನಿಯೊಂದಿಗೆ ಟ್ವಿಟ್ಟರ್‌ ಮತ್ತು ಇಮೇಲ್ ಮೂಲಕ ಕರ್ನಾಟಕ ಸರಕಾರಕ್ಕೆ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸುವ ಅಭಿಯಾನವನ್ನು ಜನವರಿ 2 ರಂದು ಮಧ್ಯಾಹ್ನ ನಡೆಸಲು ತೀರ್ಮಾನಿಸಿದ್ದಾರೆ. #NRIAPPEALDAY ಎಂಬ ಹ್ಯಾಷ್‌ ಟ್ಯಾಗ್‌ನೊಂದಿಗೆ ಜನವರಿ 2ರಂದು ಅಂತರಾಷ್ಟ್ರೀಯ ಅನಿವಾಸಿ ಕನ್ನಡಿಗರ ಮನವಿ ದಿನವಾಗಿ ಆಚರಿಸಲು ಮುಂದಾಗಿದ್ದಾರೆ.

ಅನಿವಾಸಿ ಕನ್ನಡಿಗರಿಗಾಗಿಯೇ ಕರ್ನಾಟಕ ಸರಕಾರದಲ್ಲಿ ಅನಿವಾಸಿ ಭಾರತೀಯ ಸಮಿತಿ ಇದೆ(ಕೆಎನ್ಆರ್‌ಐ ಪೋರಂ), ಅದರ ಅಧ್ಯಕ್ಷರು ಸ್ವತಃ ಮುಖ್ಯಮಂತ್ರಿಗಳು, ಆದರೆ ಮುಖ್ಯಮಂತ್ರಿಗಳಿಗೆ ಸರ್ಕಾರದ ಇತರ ಗಂಭೀರ ಜವಾಬ್ದಾರಿಗಳಿರುವ ಕಾರಣ ಕೆಎನ್ಆರ್‌ಐ ಸಮಿತಿಯಲ್ಲಿ ಉಪಾಧ್ಯಕ್ಷರಿಗೇ ಹೆಚ್ಚಿನ ಜವಾಬ್ದಾರಿ. ಆದರೆ ಕಳೆದ ಮೂರು ವರ್ಷಗಳ ಹಿಂದೆ ತೆರವುಗೊಂಡ ಉಪಾಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಯಾರನ್ನು ನೇಮಕವೇ ಮಾಡಿಲ್ಲ.

ಹಲವಾರು ಕನ್ನಡಪರ ಸಂಘಟನೆಗಳು ಈ ಕುರಿತು ಸರ್ಕಾರದ ಗಮನ ಸೆಳೆದಿದ್ದರೂ ಯಾರು ಸ್ಪಂದಿಸುವ ಗೋಜಿಗೆ ಹೋಗಿರಲಿಲ್ಲ, ಇದೀಗ ಶತಾಯಗತಾಯ ಬೇಡಿಕೆಯನ್ನು ಕರ್ನಾಟಕ ಸರಕಾರಕ್ಕೆ ತಲುಪಿಸಿ ಸೇರಿಸಿಕೊಳ್ಳಬೇಕೆಂದು ಈಡೇರಿಸಿ ಕೊಳ್ಳಬೇಕೆಂದು ಅನಿವಾಸಿ ಕನ್ನಡಿಗರು ತೀರ್ಮಾನಿಸಿದಂತಿದೆ. ಹಾಗಾಗಿ ಈ ವಿಭಿನ್ನ ಅಭಿಯಾನದ ಮೂಲಕ ಒಗ್ಗಟ್ಟಾಗಿ ಧ್ವನಿಎತ್ತಲಿದ್ದಾರೆ.

ಅಂತರರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಕರೆಕೊಟ್ಟಿರುವ ಈ ಅಭಿಯಾನಕ್ಕೆ ಈಗಾಗಲೇ ಅಮೆರಿಕ, ಯುಎಇ, ಬ್ರಿಟನ್, ಆಸ್ಟ್ರೇಲಿಯಾ, ಕತಾರ್, ಕುವೈಟ್, ಇಟಲಿ, ಜರ್ಮನಿ, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡಾ, ಇಥಿಯೋಪಿಯ, ಡೆನ್ಮಾರ್ಕ್, ನೈಜೀರಿಯಾ, ಹಾಲೆಂಡ್, ಓಮನ್, ಬಹರೈನ್, ಇಂಡೋನೇಷಿಯಾ, ಸೌದಿ ಅರೇಬಿಯಾ, ಇಸ್ರೇಲ್, ಈಜಿಪ್ಟ್, ಸ್ವಿಜರ್ಲ್ಯಾಂಡ್, ಘಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಹಾಂಕಾಂಗ್, ಸಿಂಗಪೂರ್, ಸ್ಕಾಟ್ಲ್ಯಾಂಡ್, ನಾರ್ವೆ, ನೆದರ್ಲ್ಯಾಂಡ್, ದಕ್ಷಿಣ ಕೊರಿಯಾ ಇನ್ನಿತರ ದೇಶದ ನೂರಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಈಗಾಗಲೇ ಬೆಂಬಲ ಘೋಷಿಸಿದ್ದಾರೆ. ‘ಅನಿವಾಸಿಗಳಿಗಾಗಿ ಒಂದು ದಿನ’ ಎಂದು ದೇಶ ವಿದೇಶಗಳಲ್ಲಿ ಇರುವ ಎಲ್ಲಾ ಕನ್ನಡಿಗರೊಂದಿಗೆ ಅಭಿಯಾನದಲ್ಲಿ ಭಾಗವಹಿಸಲು ವಿನಂತಿಸಿದ್ದಾರೆ.

Comments

Leave a Reply

Your email address will not be published. Required fields are marked *