ಕರ್ನಾಟಕದಲ್ಲೇ ಕ್ಯಾಸಿನೋ ಓಪನ್ ಮಾಡಿ: ಜೆಡಿಎಸ್ ಶಾಸಕ ಸುರೇಶ್ ಗೌಡ

– ಕರ್ನಾಟಕದ ದುಡ್ಡೆಲ್ಲ ಶ್ರೀಲಂಕಾ ಕ್ಯಾಸಿನೋಗೆ ಹೋಗ್ತಿದೆ

ಮಂಡ್ಯ: ಕರ್ನಾಟಕದಲ್ಲೇ ಕ್ಯಾಸಿನೋ ಓಪನ್ ಮಾಡಿ ಎಂದು ಸರ್ಕಾರ ಸಲಹೆ ಕೊಡಬೇಕೆಂದಿದ್ದೇನೆ ಎಂದು ಜೆಡಿಎಸ್ ಶಾಸಕ ಸುರೇಶ್‍ಗೌಡ ಹೇಳಿದ್ದಾರೆ.

ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಲ್ಲಿ ಯಾರ್ಯಾರು ಹೆಚ್ಚಿಗೆ ದುಡ್ಡು ಮಾಡಿದ್ದರೋ ಅವರೆಲ್ಲ ಅಲ್ಲಿ ದುಡ್ಡು ಕಳೆಯುತ್ತಿದ್ದಾರೆ. ಕರ್ನಾಟಕದ ದುಡ್ಡೆಲ್ಲ ಶ್ರೀಲಂಕಾ ಕ್ಯಾಸಿನೋಗೆ ಹೋಗುತ್ತಿದೆ. ಕ್ಯಾಸಿನೋವನ್ನು ಕರ್ನಾಟಕದಲ್ಲೇ ಓಪನ್ ಮಾಡಿ ನಮ್ಮ ದುಡ್ಡು ನಮ್ಮಲ್ಲೆ ಉಳಿಸಿ ಎಂದು ಸರ್ಕಾರ ಸಲಹೆ ಕೊಡಬೇಕೆಂದಿದ್ದೇನೆ ಎಂದರು.

ಜಮೀರಣ್ಣ ಒಬ್ಬರೇ ಅಲ್ಲ ಕ್ಯಾಸಿನೋಗೆ ಒಂದು ಟೀಂ ಹೋಗುತ್ತೆ. ಎಲ್ಲರ ಪಾಸ್‍ಪೋರ್ಟ್ ತೆಗೆದುನೋಡಿದರೆ ಎಲ್ಲ ಮಾಹಿತಿ ಸಿಕ್ಕಿಬಿಡುತ್ತೆ. ದುಡ್ಡು ಇದ್ದರೆ ಪ್ರಪಂಚದಲ್ಲಿ ಸಿಗುವ ಎಲ್ಲ ವಸ್ತುಗಳು ಕ್ಯಾಸಿನೋದಲ್ಲಿ ಸಿಗುತ್ತೆ. ರಾಜಕಾರಣಿಗಳು ಡ್ರಗ್ ತೆಗೆದುಕೊಳ್ಳುವ ಬಗ್ಗೆ ನನಗೆ ಗೊತ್ತಿಲ್ಲ. ನಾವು ಜಮೀರ್ ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ. ನಾವು ಕಾಂಗ್ರೆಸ್ ಪರ ಇದ್ದು ಸರ್ಕಾರ ಮಾಡಿದ್ದವರು. ನಾವು ಯಾಕೆ ಅವರನ್ನು ಟಾರ್ಗೆಟ್ ಮಾಡ್ತೀವಿ ಇದೆಲ್ಲವೂ ಊಹಾಪೋಹಗಳು ಎಂದು ತಿಳಿಸಿದ್ದಾರೆ.

ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೆಜಿ ಹಳ್ಳಿ, ಡಿಜೆ ಹಳ್ಳಿ ಅಂತ ಶುರು ಮಾಡಿತ್ತು. ಈಗ ಅದು ಮುಗಿದ ಬಳಿಕ ಡ್ರಗ್ ವಿಚಾರ ಶುರು ಮಾಡಿದ್ದಾರೆ. ಇವೆಲ್ಲವೂ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳು. ರಾಜ್ಯದಲ್ಲಿ ಕಷ್ಟಕರ ಸಮಸ್ಯೆಗಳಿವೆ ಆದರೆ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗುತ್ತಿದೆ. ಈ ಹಿಂದೆ ಡ್ರಗ್ ದಂಧೆ ಇರುವುದು ಪೋಲಿಸರಿಗೆ ಗೊತ್ತಿರಲಿಲ್ವಾ? ಆಗ ಏಕೆ ಸುಮ್ಮನಿದ್ದರು ಎಂದು ಸುರೇಶ್ ಗೌಡ ಪ್ರಶ್ನೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *