ಕಮಾಲ್ ಮಾಡದ ಕಮಲ್- ಅಣ್ಣಾಮಲೈ, ಮೆಟ್ರೋ ಮ್ಯಾನ್ ಶ್ರೀಧರನ್‍ಗೆ ಸೋಲಿನ ಕಹಿ

– ರತ್ನಪ್ರಭಾಗೆ ಠೇವಣಿ ನಷ್ಟ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮಕ್ಕಳ್ ನಿಧಿ ಮಯಂ ಪಕ್ಷದಿಂದ ಕೊಯಂಬತ್ತೂರು ದಕ್ಷಿಣದಿಂದ ಸ್ಪರ್ಧಿಸಿದ್ದ ಕಮಲ್ ಹಾಸನ್ 43,451 ಮತಗಳನ್ನು ಪಡೆಯುವ ಮೂಲಕ ಜಯ ಗಳಿಸಿದರು. ಆದರೆ ತಮಿಳುನಾಡಿನ ಉಳಿದ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಇದರಿಂದ ಕಮಲ್‍ಗೆ ನಿರಾಸೆಯಾಗಿದೆ.

ತಿರುಪತಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿಜೆಪಿಯ ರತ್ನಪ್ರಭಾಗೆ ಠೇವಣಿ ನಷ್ಟವಾಗಿದೆ. ತಿರುಪತಿ ಲೋಕಸಭಾ ಕ್ಷೇತ್ರದಲ್ಲಿ ಮದಿಲ್ಲ ಗುರುಮೂರ್ತಿ 6,26,108 ಮತಗಳಿಂದ ಜಯಗಳಿಸಿದರು. ರತ್ನಪ್ರಭಾ ಅವರು ಕೇವಲ 56,842 ಮತಗಳನ್ನು ಮಾತ್ರ ಪಡೆದು ನಿರಾಸೆ ಅನುಭವಿಸಿದರು.

ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಅರವರಕಚ್ಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕರ್ನಾಟಕದ ಸಿಂಗಂ ಎಂದು ಹೆಸರುವಾಸಿಯಾಗಿದ್ದ ಅಣ್ಣಾಮಲೈ ಸೋಲು ಕಂಡಿದ್ದಾರೆ. ಅಣ್ಣಾಮಲೈಗೆ ತೀವ್ರ ಸ್ಪರ್ಧೆ ನೀಡಿದ ಡಿಎಂಕೆ ಪಕ್ಷದ ಅಭ್ಯರ್ಥಿ ಎಲಂಗೋ.ಆರ್ 26,719 ಮತ ಪಡೆದು ವಿಜಯಿಯಾದರೆ, ಅಣ್ಣಾಮಲೈ 22,335 ಮತ ಪಡೆದು ಸೋಲು ಕಂಡರು.

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಮೆಟ್ರೋ ಮ್ಯಾನ್ ಶ್ರೀಧರನ್‍ಗೆ ಸೋಲಿನ ಆಘಾತವಾಗಿದೆ. ಪಾಲಕ್ಕಾಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಧರನ್ 49,155 ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದ ಶಾಫಿ ಪರಂಬಿಲ್ 53,080 ಮತ ಪಡೆದು ಜಯ ಗಳಿಸಿದರು.

Comments

Leave a Reply

Your email address will not be published. Required fields are marked *