ಕಮಲ ಮುಡಿಯಲಿದ್ದಾರಾ ಎನ್.ಮಹೇಶ್?- ಬಿಜೆಪಿ ನಾಯಕರೊಂದಿಗೆ ಗೌಪ್ಯ ಸಭೆ

ಚಾಮರಾಜನಗರ: ಗ್ರಾ.ಪಂ.ಚುನಾವಣೆ ಘೋಷಣೆ ಬೆನ್ನಲ್ಲೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ರಾಜಕೀಯ ಅಖಾಡ ರಂಗೇರಿದೆ. ಬಿಎಸ್‍ಪಿ ಪಕ್ಷದಿಂದ ಉಚ್ಛಾಟಿತರಾಗಿರುವ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಮುಂದಿನ ನಡೆಯೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದ್ದು, ಕಮಲ ಮುಡಿಯಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.

ಕಳೆದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ವಿಶ್ವಾಸ ಮತದ ದಿನ ಗೈರಾಗುವ ಮೂಲಕ ಪರೋಕ್ಷವಾಗಿ ಬಿಜೆಪಿ ಬೆಂಬಲಿಸಿದ್ದ ಎನ್.ಮಹೇಶ್, ಬಿಎಸ್‍ಪಿ ಪಕ್ಷದಿಂದ ಉಚ್ಛಾಟಿತವಾಗಿದ್ದರು. ಇದೀಗ ಗ್ರಾ.ಪಂ.ಚುನಾವಣೆ ಹಿನ್ನಲೆ ತಮ್ಮ ಬೆಂಬಲಿಗರು, ಕಾರ್ಯಕರ್ತರಿಗೆ ಅಧಿಕಾರ ಒದಗಿಸಿಕೊಡಬೇಕಾಗಿರುವ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ. ಈ ಕುರಿತು ಸಚಿವರಾದ ಆರ್.ಅಶೋಕ್,ಸೋಮಶೇಖರ್, ಗೋಪಾಲಯ್ಯ, ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜೆಯೇಂದ್ರ, ರವಿಕುಮಾರ್ ಜೊತೆಗೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆಗೂ ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿತ್ತು. ಚಾಮರಾಜನಗರ ಜಿಲ್ಲೆಯ ದಲಿತ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಶಾಸಕ ಎನ್.ಮಹೇಶ್ ಸೆಳೆಯಲು ನಿರ್ಧಾರ ಮಾಡಿದೆ. ಸಂಕ್ರಾಂತಿ ನಂತರ ಅಧಿಕೃತವಾಗಿ ಎನ್.ಮಹೇಶ್ ಬಿಜೆಪಿ ಸೇರ್ಪಡೆ ಸಾಧ್ಯತೆ ನಿಚ್ಚಳವಾಗಿದೆ. ವಿಜೆಯೇಂದ್ರ ಅವರು ಸಹ ಕಳೆದ ವಿಶ್ವಾಸ ಮತದ ವೇಳೆ ಬಿಜೆಪಿಗೆ ಸಹಕಾರ ನೀಡಿದ್ದರು. ಪಕ್ಷ ಸೇರ್ಪಡೆಗೆ ಅವರೇ ನಿರ್ಧಾರ ಮಾಡಲಿ ಎಂದು ಹೇಳಿರುವುದು ಪಕ್ಷ ಸೇರ್ಪಡೆಗೆ ಇಂಬು ನೀಡಿದೆ.

ಕ್ಷೇತ್ರದ ಅಭಿವೃದ್ಧಿ ಹಾಗೂ ಮುಂದಿನ ರಾಜಕೀಯದ ಏಳಿಗೆಗೆ ಬಿಜೆಪಿ ಸೇರ್ಪಡೆಗೆ ಚಿಂತನೆ ನಡೆಸಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಚಾಮರಾಜನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಎನ್.ಮಹೇಶ್, ಬಿಜೆಪಿ ಸರ್ಕಾರ ರಚನೆಯಲ್ಲಿ ಎನ್.ಮಹೇಶ್ ಪಾತ್ರ ವಹಿಸಿದ್ದರು.

Comments

Leave a Reply

Your email address will not be published. Required fields are marked *