ಕದನ ವಿರಾಮ ಉಲ್ಲಂಘಿಸಿ ಮತ್ತೆ ಉದ್ಧಟತನ ಮೆರೆದ ಪಾಕ್

ಶ್ರೀನಗರ: ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಉದ್ಧಟತನ ಮೆರೆದಿದೆ. ಸೋಮವಾರ ನಸುಕಿನಜಾವ 3:30ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಕೃಷ್ಣ ಘಾಟಿ ಹಾಗೂ ನೌಶೇರಾ ವಲಯಗಳಲ್ಲಿ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದೆ.

ಪಾಕಿಸ್ತಾನವು ಮತ್ತೆ ಬೆಳಗ್ಗೆ 5:30ರ ಸುಮಾರಿಗೆ ನೌಶೇರಾ ಸೆಕ್ಟರ್‌ನ ನಿಯಂತ್ರಣ ರೇಖೆಯಲ್ಲಿ (ಎಲ್‍ಒಸಿ) ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತು. ಇದಕ್ಕೆ ಭಾರತೀಯ ಸೇನೆಯು ಸರಿಯಾದ ಪ್ರತ್ಯುತ್ತರ ನೀಡಿದೆ.

ಭಯೋತ್ಪಾದಕರು ಭಾರತಕ್ಕೆ ಪ್ರವೇಶಿಸಲು ಪಾಕಿಸ್ತಾನವು ಆಗಾಗ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡುತ್ತದೆ. ಈ ವರ್ಷ ಇದಕ್ಕೆ ಸರಿಯಾಗಿ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆಯು ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳನ್ನು ಹೊಡೆದುರುಳಿಸಿವೆ.

ಈ ವರ್ಷ ಇಲ್ಲಿವರೆಗೂ 100ಕ್ಕೂ ಹೆಚ್ಚು ಭಯೋತ್ಪಾದಕರು ಭಾತರದ ಯೋಧರು ಹತ್ಯೆ ಮಾಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಜೂನ್ 19ರಂದು ಹೇಳಿದ್ದರು. ಈ ಪೈಕಿ 50 ಮಂದಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ್ದರೆ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ತಲಾ 20 ಮಂದಿ ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ. ಉಳಿದವರು ಅನ್ಸಾರ್-ಘಜ್ವಾತುಲ್ ಹಿಂದ್ ಅಲ್-ಬದ್ರ್ ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದವರು ಎಂದು ಡಿಜಿಪಿ ತಿಳಿಸಿದ್ದರು.

Comments

Leave a Reply

Your email address will not be published. Required fields are marked *