ಕದಂಬ ನೌಕಾನೆಲೆಗೆ ಸಂಸದೀಯ ಸಮಿತಿ ಸದಸ್ಯರ ಭೇಟಿ

– ರಾಹುಲ್ ಗಾಂಧಿ, ಪ್ರತಾಪ್ ಸಿಂಹ ಗೈರು

ಕಾರವಾರ: ಕದಂಬ ನೌಕಾದಳದ ಎರಡನೇ ಹಂತದ ಕಾಮಗಾರಿ ಪರಿಶೀಲನೆಗೆ ಕೇಂದ್ರ ಸರ್ಕಾರದ ಸಂಸದೀಯ ರಕ್ಷಣಾ ಸ್ಥಾಯಿ ಸಮಿತಿ ಸದಸ್ಯರು ಇಂದು ಕಾರವಾರದ ಅರಗದಲ್ಲಿರುವ ಕದಂಬ ನೌಕಾ ನೆಲೆಗೆ ಭೇಟಿ ನೀಡಿದರು.

ಜುವಾಲ್ ಓರಮ್ ಅಧ್ಯಕ್ಷತೆಯಲ್ಲಿ ಆಗಮಿಸಿದ ಮೂವತ್ತು ಜನರ ಕಮಿಟಿಯಲ್ಲಿ ರಾಜ್ಯಸಭಾ ಸದಸ್ಯ ಶರದ್ ಪವಾರ್, ವಿಜಯೇಂದ್ರ ಸಿಂಗ್, ಡಾ.ಅಶೋಕ್, ವಾಜಪೇಯಿ, ಪ್ರೇಮಚಂದ್ ಗುಪ್ತಾ, ಸಂಸದರಾದ ಕುಮಾರ್ ಡ್ಯಾನಿಷ್ ಅಲಿ, ಅಜಯ್ ಭಟ್, ಕರ್ನಾಟಕದ ಅಣ್ಣಾಸಾಬ್ ಜೊಲ್ಲೆ, ರಾಮ್ ಶಂಕರ್ ಕಟಾರಿಯ, ಪಿ.ಆರ್.ಫಣಿವೇಂದ್ರ ಮುಂತಾದವರು ಆಗಮಿಸಿದ್ದಾರೆ. ಇಂದು ಕದಂಬ ನೌಕಾ ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿ ಹಾಗೂ ಭದ್ರತೆ ಕುರಿತು ಸಭೆ ನಡೆಸಿ ಮಾಹಿತಿ ಪಡೆಯಲಿದ್ದಾರೆ.

ರಾಹುಲ್ ಗಾಂಧಿ, ಪ್ರತಾಪ್ ಸಿಂಹ ಗೈರು:
ಏಷ್ಯದ ಎರಡನೇ ಅತೀ ದೊಡ್ಡ ನೌಕಾನೆಲೆ ಎಂಬ ಖ್ಯಾತಿ ಹೊಂದಿರುವ ಕಾರವಾರದ ಕದಂಬ ನೌಕಾ ನೆಲೆಯಲ್ಲಿ 2018 ರಲ್ಲಿ ಎರಡನೇ ಹಂತದ 13,500 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಇದರ ಖರ್ಚು ವೆಚ್ಚ, ಕಾಮಗಾರಿ ಗುಣಮಟ್ಟ, ಪ್ರಸಕ್ತ ಸ್ಥಿತಿಗಳ ಬಗ್ಗೆ ಅಧ್ಯಯನ ನೆಡೆಸಿ ಕಮಿಟಿಯು ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಜೊತೆಗೆ ಹಣ ಬಿಡುಗಡೆ ಮತ್ತು ಗುಣಮಟ್ಟದಲ್ಲಿ ಸಹ ಈ ಸಮಿತಿಯ ಪಾತ್ರ ಮುಖ್ಯವಾಗಿರುತ್ತದೆ. ಆದ್ರೆ ಈ ಸಮಿತಿಯಲ್ಲಿದ್ದ ರಾಹುಲ್ ಗಾಂಧಿ ಹಾಗೂ ಪ್ರತಾಪ್ ಸಿಂಹ ಸೇರಿದಂತೆ ಅನೇಕ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಗೈರಾಗಿದ್ದಾರೆ.

ಗೋವಾದಿಂದ ಆಗಮಿಸಿರುವ ಈ ಕಮಿಟಿಯಲ್ಲಿ ಅಧಿಕಾರಿಗಳು ಸೇರಿ ಒಟ್ಟು ಮೂವತ್ತು ಜನರಿದ್ದು, ಇಂದು ಕದಂಬ ನೌಕಾನೆಲೆಯಲ್ಲಿ ಸಭೆ ನಡೆಸಿ ಕಾಮಗಾರಿ ಪರಿಶೀಲನೆ ಕೈಗೊಂಡು ಸಂಜೆ ಆರು ಗಂಟೆಗೆ ಗೋವಾಕ್ಕೆ ಮರಳಲಿದ್ದಾರೆ.

Comments

Leave a Reply

Your email address will not be published. Required fields are marked *