ಕತಾರ್ ನಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ವಿಮಾನದ ವ್ಯವಸ್ಥೆ

ಬೆಂಗಳೂರು: ಕೊರೊನಾದಿಂದಾಗಿ ಕತಾರ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ವಿಮಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕತಾರಿನಲ್ಲಿರುವ 185 ಜನ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಕೊರೊನಾದಿಂದ ಕತಾರಿನಲ್ಲಿದ್ದ ಕನ್ನಡಿಗರು ಕೆಲಸ ಕಳೆದುಕೊಂಡು ವಾಸ್ತವ್ಯ ಹೂಡಲಾಗದೇ ಸಂಕಷ್ಟದಲ್ಲಿ ಸಿಲುಕಿದ್ದರು. ಇದರಲ್ಲಿ ಗರ್ಭಿಣಿಯರು, ವಯೋವೃದ್ಧರು, ಅನಾರೊಗ್ಯದಿಂದ ಬಳಲುತ್ತಿರುವವರಿದ್ದಾರೆ. ಇವರಿಗಾಗಿ ದೋಹಾದಿಂದ ಬೆಂಗಳೂರಿಗೆ ನೇರವಿಮಾನದ ವ್ಯವಸ್ಥೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡಿದೆ.

ಕತಾರ್‍ನಿಂದ ಸುಮಾರು 1,300 ಜನರು ಊರಿಗೆ ಬರಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರಲ್ಲಿ ಕರ್ನಾಟಕದ ಕರಾವಳಿಯವರೇ ಹೆಚ್ಚು. ಬೆಂಗಳೂರು, ಮೈಸೂರು, ಮಂಡ್ಯ ಮೊದಲಾದೆಡೆ ಹೋಗುವವರು ಬೆಂಗಳೂರಿನ ಮೂಲಕ ಹೋಗುವವರಾದರೆ, ಅತ್ತ ಕಾಸರಗೋಡು, ಇತ್ತ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಭಟ್ಕಳ, ಬೈಂದೂರಿನವರೆಗೆ ಹೋಗುವವರು ಮಂಗಳೂರನ್ನು ಆಶ್ರಯಿಸಬೇಕಾಗಿದೆ.

ಕತಾರ್ ನಲ್ಲಿರುವ ಕನ್ನಡಿಗರನ್ನು ಆದಷ್ಟು ಬೇಗ ಭಾರತಕ್ಕೆ ಕರೆತರಬೇಕು. ಹೀಗೆ ಮುಂದುವರಿದು ಮಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂತಿರುಗಬೇಕೆಂದಿರುವ ಕನ್ನಡಿಗರಿಗೆ ವಿಮಾನ ಸೇವೆಯನ್ನು ವ್ಯವಸ್ಥೆ ಕಲ್ಪಿಸಬೇಕೆಂದು ಕತಾರ್ ನಲ್ಲಿರುವ ಭಾರತೀಯ ಸಮುದಾಯ ಹಿತೈಷಿ ವೇದಿಕೆಯ ಕನ್ನಡ ಪ್ರತಿನಿಧಿ ಸುಬ್ರಮಣ್ಯ ಹೆಬ್ಬಾಗಿಲು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *