ಕಣ್ಣೊರೆಸಿ ಕನ್ನಡ ಹೇಳಿ ಕೊಟ್ಟ ಸರಸ್ವತಿ ನನ್ನಮ್ಮ- ಅನುಶ್ರೀ ಭಾವನಾತ್ಮಕ ಪೋಸ್ಟ್

ಬೆಂಗಳೂರು: ತಮ್ಮ ವಿಭಿನ್ನ ಶೈಲಿಯ ನಿರೂಪಣೆಯಿಂದಲೇ ನಾಡಿನ ಜನತೆಗೆ ಚಿರಪರಿಚಿತರಾಗಿರುವ ಆ್ಯಂಕರ್ ಅನುಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ವೈಯಕ್ತಿಕ, ವೃತ್ತಿ ಬದುಕು ಹಾಗೂ ಆಗುಹೋಗುಗಳ ಕುರಿತು ಪೋಸ್ಟ್ ಮಾಡುತ್ತಿರುತ್ತಾರೆ. ಅದೇ ರೀತಿ ಅವರ ಅಮ್ಮನ ಹುಟ್ಟುಹಬ್ಬಕ್ಕೆ ಮನಮಿಡಿಯುವ ಸಾಲುಗಳನ್ನು ಬರೆಯುವ ಮೂಲಕ ವಿಶ್ ಮಾಡಿದ್ದಾರೆ.

ಇತ್ತೀಚೆಗೆ ಚಿರು ಸರ್ಜಾ ಸಾವನ್ನಪ್ಪಿದ ವೇಳೆ ಭಾವನಾತ್ಮಕ ಸಾಲುಗಳನ್ನು ಬರೆಯುವ ಮೂಲಕ ಅನುಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಕುರಿತು ಸಹ ಪೋಸ್ಟ್ ಮಾಡಿ ಜಾಗೃತಿ ಮೂಡಿಸಿದ್ದರು. ಯಾವ ನಗುವಿನ ಹಿಂದೆ ಯಾವ ನೋವಿರಿತ್ತೋ? ಯಾರು ಬಲ್ಲರು ಎಂದು ಬರೆದುಕೊಂಡಿದ್ದರು.

ಇದೀಗ ತಮ್ಮ ತಾಯಿ ಕುರಿತು ಪೋಸ್ಟ್ ಮಾಡುವ ಮೂಲಕ ಅನುಶ್ರೀ ಮೆಚ್ಚುಗೆಗೆ ಪಾತ್ರರಾಗಿದ್ದು, ಭಾವನಾತ್ಮಕ ಸಾಲುಗಳನ್ನು ಬರೆಯುವ ಮೂಲಕ ತಾಯಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅಮ್ಮ… ನನಗೆ ಜನ್ಮ ಕೊಟ್ಟ ಜನ್ಮದಾತೆ ನನ್ನ ಅಮ್ಮ, ಮಾತು ಕಲಿಸಿ ಮುತ್ತು ಕೊಟ್ಟ ಮುದ್ದು ನನ್ನ ಅಮ್ಮ, ನನ್ನ ಕಣ್ಣೊರೆಸಿ ಕನ್ನಡ ಹೇಳಿ ಕೊಟ್ಟ ಸರಸ್ವತಿ ನನ್ನ ಅಮ್ಮ. ವಿದ್ಯೆ, ವಿನಯತೆ ಕೊಟ್ಟ ಗುರು ನನ್ನಮ್ಮ ಎಂದು ಬರೆದುಕೊಂಡಿದ್ದಾರೆ.

ಅಮ್ಮ…
ನನಗೆ ಜನ್ಮ ಕೊಟ್ಟ ಜನ್ಮದಾತೆ ನನ್ನ ಅಮ್ಮ …
ಮಾತು ಕಲಿಸಿ ಮುತ್ತು ಕೊಟ್ಟ ಮುದ್ದು ನನ್ನ ಅಮ್ಮ ..
ನನ್ನ ಕಣ್ಣೊರೆಸಿ ಕನ್ನಡ ಹೇಳಿ…

Posted by Anchor Anushree on Wednesday, August 19, 2020

ತಾನು ನಡೆದು ನನ್ನನ್ನು ಗುರಿ ತಲುಪಿಸಿದ ಮಾರ್ಗದರ್ಶಿ ನನ್ನ ಅಮ್ಮ, ತಾನು ಹಸಿದು ನನ್ನ ಹೊಟ್ಟೆ ತುಂಬಿಸಿದ ಅನ್ನಪೂರ್ಣೆ ನನ್ನಮ್ಮ. ತಂದೆಯಾಗಿ, ಸ್ನೇಹಿತೆಯಾಗಿ ನಿಂತ ನನ್ನ ಜೀವದಾತೆ, ಎಂದೂ ನಾನು ಅನುಶ್ರೀ ಅಮ್ಮ ಎಂದು ಹೇಳದ ಸ್ವಾಭಿಮಾನಿ ನನ್ನಮ್ಮ. ಆದ್ರೆ ಅನುಶ್ರೀ ನಿಮ್ಮ ಮಗಳು ಎಂತ ಪ್ರತಿಭಾನ್ವಿತೆ ಅಲ್ವಾ ಎಂದಾಗ ಹೆಮ್ಮೆಯಿಂದ ಬೀಗುವ ನನ್ನ ಹೆಮ್ಮೆಯ ಅಮ್ಮ ಎಂಬ ಭಾವನಾತ್ಮಕ ಸಾಲುಗಳನ್ನು ಹಾಕಿದ್ದಾರೆ.

ಸೋಲದಿರು, ಗೆಲ್ಲುವ ಪ್ರಯತ್ನ ಬಿಡದಿರು ಎಂದು ಜೀವನ ಪಾಠ ಹೇಳಿಕೊಟ್ಟ ರಿಯಲ್ ಹೀರೋ ನನ್ನಮ್ಮ. ಅಮ್ಮ ಹುಟ್ಟು ಹಬ್ಬದ ಶುಭಾಶಯಗಳು, ನನ್ನ ಆಯುಷ್ಯ ನಿಮ್ಮ ಪಾಲಾಗಲಿ ಎಂಬ ಮನ ಮಿಡಿಯುವ ಸಾಲುಗಳನ್ನು ಪೋಸ್ಟ್ ಮಾಡುವ ಮೂಲಕ ತಾಯಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

ಅನುಶ್ರೀ ಪೋಸ್ಟ್‍ಗೆ ಹಲವರು ಕಮೆಂಟ್ ಮಾಡಿದ್ದು, ಇಂತಹ ಮಗಳನ್ನು ಪಡೆದ ನೀವೇ ಧನ್ಯರು ಎಂದು ಹೇಳಿದ್ದಾರೆ. ಇನ್ನೂ ಹಲವರು ತಮ್ಮ ಕಮೆಂಟ್‍ಗಳ ಮೂಲಕವೇ ಅನುಶ್ರೀಯವರ ತಾಯಿಗೆ ಶುಭ ಕೋರಿದ್ದಾರೆ.

Comments

Leave a Reply

Your email address will not be published. Required fields are marked *