ಕಟೀಲ್ ರಾಜ್ಯ ಬಿಜೆಪಿಯ ಕಾಮಿಡಿ ಆ್ಯಕ್ಟರ್: ಕಾಂಗ್ರೆಸ್ ಟ್ವೀಟ್

-ಕಾಂಗ್ರೆಸ್ ಟ್ವೀಟ್‍ಗೆ ನಳಿನ್ ತಿರುಗೇಟು

ಬೆಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯ ಬಿಜೆಪಿಯ ಕಾಮಿಡಿ ಆ್ಯಕ್ಟರ್ ಎಂದು ವ್ಯಂಗ್ಯವಾಡಿ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಕಾಂಗ್ರೆಸ್ ಟ್ವೀಟ್‍ಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಮಿಡಿ ಮಾಡುವ ವ್ಯಕ್ತಿ ಯಾರು ಮತ್ತು ಕಾಮಿಡಿಯಾದ ಪಕ್ಷ ಯಾವುದು ಎಂದು ದೇಶದ ಜನತೆಗೆ ಗೊತ್ತು ಎಂದು ಟ್ವೀಟ್ ಮಾಡಿದ್ದಾರೆ.

ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ಬಗ್ಗೆ ಕಾಂಗ್ರೆಸ್ ರಾಜ್ಯದ ರೈತರನ್ನು ದಿಕ್ಕು ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದರು. ಈ ಟ್ವೀಟ್ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಕಟೀಲ್ ಅವರಿಗೆ ತಿರುಗೇಟು ನೀಡಿತ್ತು.

ನಳಿನ್ ಟ್ವೀಟ್: ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ರೈತನ ಮಗನಾಗಿ, ರೈತಪರ ಹೋರಾಟಗಳಿಂದ ಜನಮನ ಗೆದ್ದವರು. ಆದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು, ರೈತರ ಭೂಮಿಯನ್ನು ಕಬಳಿಸಿ ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಅಮಾಯಕ ರೈತರನ್ನು ದಾರಿ ತಪ್ಪಿಸಿ ಮೋಸಗೊಳಿಸುತ್ತಿದ್ದಾರೆ. ಅವರ ಕಪಟ ಹೋರಾಟವನ್ನು ನೈಜ ರೈತ ನಂಬುವುದಿಲ್ಲ.

ಕಾಂಗ್ರೆಸ್ ಟ್ವೀಟ್: ರಾಜ್ಯ ಬಿಜೆಪಿಯ ಕಾಮಿಡಿ ಆಕ್ಟರ್ ನಳಿನ್ ಕುಮಾರ್ ಕಟೀಲ್‍ಅವರೇ ಅಕ್ರಮ ‘ಡಿನೋಟಿಫಿಕೇಷನ್’ ನಂತಹ ಭೂ ಹಗರಣದವರು, ಅಕ್ರಮ ಗಣಿ ಹಗರಣದವರು, ಜೈಲಿಗೆ ಹೋಗಿ ಬಂದವರು ನಿಮ್ಮಲ್ಲೇ ಇದ್ದಾರೆ. ‘ಒಂದು ಡಾಲರ್’ಗೆ 15 ರೂಪಾಯಿ ಮಾಡುತ್ತೇವೆಂದು ಅಮಾಯಕರ ದಾರಿ ತಪ್ಪಿಸುವ ಕಲೆ ನಿಮಗಿಂತ ಚೆನ್ನಾಗಿ ಇನ್ಯಾರಿಗೆ ತಿಳಿದಿರಲು ಸಾಧ್ಯ ಹೇಳಿ?

ನಳಿನ್ ಟ್ವೀಟ್: ಕಾಮಿಡಿ ಮಾಡುವ ವ್ಯಕ್ತಿ ಯಾರು ಮತ್ತು ಕಾಮಿಡಿಯಾದ ಪಕ್ಷ ಯಾವುದು ಎಂದು ದೇಶದ ಜನತೆಗೆ ಸರಿಯಾಗಿ ತಿಳಿದಿದೆ. ಜೈಲಿಗೆ ಹೋಗಿ ಬಂದವರೆಲ್ಲಾ ಬಿಜೆಪಿಯಲ್ಲೇ ಇರುವುದು ಎಂದಾದರೇ ತಿಹಾರ್ ಜೈಲು ಕಾಂಗ್ರೆಸ್ ನವರಿಗೆ ಜೈಲಿನ ಹಾಗೆ ಕಾಣಲಿಲ್ಲವೇ? ಜಾಮೀನಿನ ಮೇಲೆ ಹೊರಗೆ ಇರುವುದೇ ಪಕ್ಷದ ಅಧ್ಯಕ್ಷರಾಗಲು ಇರುವ ಮಾನದಂಡವೇ ಎಂದು ಪ್ರಶ್ನೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *