ಒಂದೇ ಕುಟುಂಬದ ನಾಲ್ವರು ಕೊರೊನಾದಿಂದ ಸಾವು – ಒಬ್ಬರ ಹಿಂದೆ ಮತ್ತೊಬ್ಬರನ್ನ ಬಲಿ ಪಡೆದ ಹೆಮ್ಮಾರಿ

– ಬೆಳಗಾವಿ ಉಪಚುನಾವಣೆಯೇ ಕಾರಣವಾಯ್ತಾ..?

ಬಾಗಲಕೋಟೆ: ಮಹಾಮಾರಿ ಕೊರೊನಾ ವೈರಸ್ ಇಡೀ ಕುಟುಂಬವನ್ನೇ ಬಲಿ ಪಡೆದಿದೆ. ಒಂದೇ ಕುಟುಂಬದ ನಾಲ್ವರು ಕಿಲ್ಲರ್ ಕೊರೊನಾದಿಂದ ಮೃತಪಟ್ಟಿದ್ದು, ಒಬ್ಬರ ಹಿಂದೆ ಮತ್ತೊಬ್ಬರನ್ನ ಈ ಹೆಮ್ಮಾರಿ ಬಲಿ ಪಡೆದಿದೆ.

ಪತಿ, ಪತ್ನಿ, ಅತ್ತೆ, ಮಾವ ನಾಲ್ವರರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ತಾಲೂಕಿನ ದೇವಿನಾಳ ಗ್ರಾಮದ ವೆಂಕಟೇಶ್ ಒಂಟಗೋಡಿ(45), ವೆಂಕಟೇಶ್ ಪತ್ನಿ ಶಿಕ್ಷಕಿ ರಾಜೇಶ್ವರಿ(40), ಮಾವ(ರಾಜೇಶ್ವರಿ ಅಪ್ಪ) ರಾಮನಗೌಡ ಉದಪುಡಿ(74), ಅತ್ತೆ(ರಾಜೇಶ್ವರಿ ತಾಯಿ) ಹಾಗೂ ಲಕ್ಷ್ಮೀಬಾಯಿ(68) ಮೃತ ದುರ್ದೈವಿಗಳು.

ಮೇ 3 ರಿಂದ 15 ರ ಅವಧಿಯಲ್ಲಿ ಬಾಗಲಕೋಟೆ ನಗರದ ವಿವಿಧ ಖಾಸಗಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ಇದ್ದರು. ರಾಜೇಶ್ವರಿ ಸಾಲಹಳ್ಳಿಯಲ್ಲಿ ಶಿಕ್ಷಕಿಯಾಗಿದ್ದು, ಪತಿ ವೆಂಕಟೇಶ್ ರಾಮದುರ್ಗದಲ್ಲಿ ಹಾಸ್ಟೇಲ್ ಸುಪ್ರಿಡೆಂಟ್ ಆಗಿದ್ದರು. ಹೀಗಾಗಿ ಪತ್ನಿ ಊರು ಸಾಲಹಳ್ಳಿಯಲ್ಲೆ ಮನೆ ಮಾಡಿದ್ರು.

ವೆಂಕಟೇಶ್ ಅವರ ಮಾವ ನಿವೃತ್ತ ಶಿಕ್ಷಕರಾಗಿದ್ದು, ರಾಜೇಶ್ವರಿಗೆ ಮೊದಲು ಕರೊನಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಬಳಿಕ ರಾಜೇಶ್ವರಿ ತಂದೆ, ತಾಯಿ, ಪತಿ ಸೇರಿ ನಾಲ್ವರು ಕೊರೊನಾ ಚಿಕಿತ್ಸೆಗಾಗಿ ಬಾಗಲಕೋಟೆ ವಿವಿಧ ಖಾಸಗಿ ಆಸ್ಪತ್ರೆ ದಾಖಲಾಗಿದ್ರು. ಮೇ 3 ರಂದು ರಾಜೇಶ್ವರಿ ಮೃತಪಟ್ಟಿದ್ದಾರೆ. ಮೇ 5 ರಂದು ತಂದೆ ರಾಮನಗೌಡ, ಮೇ 12 ರಂದು ತಾಯಿ ಲಕ್ಷ್ಮೀಬಾಯಿ ಹಾಗೂ ಮೇ 15 ರಂದು ಪತಿ ವೆಂಕಟೇಶ್ ಕಣ್ಮುಚ್ಚಿದ್ದಾರೆ.

ವೆಂಕಟೇಶ್ ಅವರ ಪತ್ನಿ ರಾಜೇಶ್ವರಿ ಇತ್ತೀಚೆಗೆ ಬೆಳಗಾವಿ ಉಪಚುನಾವಣೆಯಲ್ಲಿ ಎಲೆಕ್ಷನ್ ಡ್ಯೂಟಿ ಮಾಡಿದ್ರು. ಅಲ್ಲಿಂದ ಬಂದ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಆ ಬಳಿಕ ಎಲ್ಲರೂ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ವು. ಬಾಗಲಕೋಟೆ ಖಾಸಗಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ರು. ಎರಡು ವಾರದ ಅಂತರದಲ್ಲಿ ನಾಲ್ವರನ್ನು ಡೆಡ್ಲಿ ಕರೊನಾ ಬಲಿ ತೆಗೆದುಕೊಂಡಿದೆ.

Comments

Leave a Reply

Your email address will not be published. Required fields are marked *