ಒಂಟಿ ಮಹಿಳೆಯ ಮನೆಗೆ ನುಗ್ಗಿ ಕೈ, ಕಾಲು ಕಟ್ಟಿ ದರೋಡೆ – ಸಿಕ್ಕಿದ್ದು ಒಂದು ಬೆಳ್ಳಿಯ ಸರ

ಮಂಗಳೂರು: ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿ, ಕೈ ಕಾಲು ಕಟ್ಟಿ ಹಾಕಿ ದರೋಡೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮೇಗಿನಪೇಟೆಯಲ್ಲಿ ನಡೆದಿದೆ.

ವಿಟ್ಲದ ಮೇಗಿನಪೇಟೆ ನಿವಾಸಿ ಲಲಿತಾ ಒಂಟಿಯಾಗಿ ತಮ್ಮ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಇದನ್ನು ತಿಳಿದ ಸ್ಥಳೀಯ ಕಳ್ಳರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗಿನ ಜಾವ ಕಳ್ಳರು ಲಲಿತಾ ಮನೆಯ ಮುಂಬಾಗಿಲು ಮೂಲಕ ನುಗ್ಗಿದ್ದಾರೆ. ನಂತರ ಲಲಿತಾ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಅಷ್ಟೇ ಅಲ್ಲದೇ ಲಲಿತಾ ಬಾಯಿಗೆ ಬಟ್ಟೆ ತುರುಕಿ ಕೈ ಕಾಲು ಕಟ್ಟಿ ಹಾಕಿ ದರೋಡೆಗೆ ಮನೆಯಲ್ಲಿ ಹುಡುಕಾಡಿದ್ದಾರೆ. ಚಿನ್ನಾಭರಣ ಹಾಗೂ ಹಣಕ್ಕಾಗಿ ಇಡೀ ಮನೆ ಶೋಧ ನಡೆಸಿದ ಕಳ್ಳರಿಗೆ ಕೇವಲ ಒಂದು ಬೆಳ್ಳಿಯ ಸರ ಸಿಕ್ಕಿದ್ದು, ಅದನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣೆಯ ಎಸ್‍ಐ ವಿನೋದ್ ಕುಮಾರ್ ರೆಡ್ಡಿ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ನಂತರ ಮನೆ ಪಕ್ಕದ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *