ಐ ಡೋಂಟ್ ವಾಂಟ್ ಟು ರಿಯಾಕ್ಟ್ ವಿಜಯೇಂದ್ರ : ಸಿದ್ದರಾಮಯ್ಯ

siddaramaiah

ಕೊಪ್ಪಳ: ಐ ಡೋಂಟ್ ವಾಂಟ್ ಟು ರಿಯಾಕ್ಟ್ ವಿಜಯೇಂದ್ರ. ನಾನು ಯಾವುದೇ ಕಾರಣಕ್ಕೂ ವಿಜಯೇಂದ್ರ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ.

ಕೊಪ್ಪಳದ ಕಾರಟಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಜಯೇಂದ್ರಗೆ ಯಾವ ಅರ್ಹತೆ ಇದೆ? ಅವರೇನಾದ್ರೂ ಸಚಿವರಾಗಿದ್ರಾ ಅಥವಾ ಸಿಎಂ ಆಗಿದ್ರಾ? ಯಡಿಯೂರಪ್ಪನವರ ಮಗ ಅನ್ನೋದು ಬಿಟ್ರೆ ಬೇರೆ ಯಾವ ಕ್ವಾಲಿಫಿಕೇಶನ್ ಇದೆ? ವಿಜಯೇಂದ್ರ ರಾಜಕೀಯದಲ್ಲಿ ಏನೂ ಅಲ್ಲ ಎಂದು ಹೇಳಿದರು.

ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಒಬ್ಬ ಪೆದ್ದ. ಅವನಿಗೆ ಬ್ರೈನ್‍ಗೂ ನಾಲಿಗೆಗೂ ಲಿಂಕ್ ಇಲ್ಲ. ಬಾಯಿಗೆ ಬಂದಂತೆ ಮಾತಾಡ್ತಾನೆ. ನಾನು ಹೇಗೆ ಕಾಂಗ್ರೆಸ್ ಪಾರ್ಟಿ ಸೇರಿದೆ ಎಂದು ನಿಮಗೆ ಗೊತ್ತಾ? ನನ್ನನ್ನು ಜೆಡಿಎಸ್‍ನಿಂದ ಹೊರಹಾಕಿದರು. ಬಳಿಕ ನಾನು ಒಂದು ವರ್ಷ ಅಹಿಂದಾ ಸಂಘಟನೆ ಮಾಡುತ್ತಿದ್ದೆ. ಆಮೇಲೆ ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ನನಗೆ ಕಾಂಗ್ರೆಸ್ ಸೇರಲು ಆಹ್ವಾನ ನೀಡಿದ ಮೇಲೆ ನಾನು ಕಾಂಗ್ರೆಸ್ ಪಕ್ಷ ಸೇರಿಕೊಂಡೆ. ಬಿಜೆಪಿ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಪಕ್ಷ ಸೇರಿಕೊಂಡೆ. ಈಶ್ವರಪ್ಪನಿಗೆ ಇದ್ಯಾವುದೂ ಗೊತ್ತಿಲ್ಲ ಎಂದು ಟೀಕಿಸಿದರು.

ಕೊರೊನಾ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಒಂದೇ ದಿನ 10 ಸಾವಿರಕ್ಕೂ ಅಧಿಕ ಕೇಸ್ ಬಂದಿವೆ. ಸರ್ಕಾರ ಬಿಗಿ ಕ್ರಮ ಕೈಗೊಂಡಿಲ್ಲ. ಸರ್ಕಾರದ ತಪ್ಪಿನಿಂದ ಎರಡನೇ ಅಲೆಯಲ್ಲಿ ಕೇಸ್‍ಗಳು ಹೆಚ್ಚುತ್ತಿವೆ. ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ. ಬಿಗಿ ಕ್ರಮ ಕೈಗೊಳ್ಳಬೇಕು. ಸರಿಯಾಗಿ ಕೋವಿಡ್ ಟೆಸ್ಟ್ ನಡೆಸಬೇಕು. ಗಡಿ ಭಾಗಗಳಲ್ಲಿ ಸರಿಯಾಗಿ ಟೆಸ್ಟ್ ನಡೆಸುತ್ತಿಲ್ಲ. ಮಹಾರಾಷ್ಟ್ರ, ಕೇರಳದಿಂದ ಬರುತ್ತಿರುವವರಿಗೆ ಸರಿಯಾಗಿ ಕೋವಿಡ್ ಟೆಸ್ಟ್ ಮಾಡುತ್ತಿಲ್ಲ. ಸರ್ಕಾರ ದುಡ್ಡು ಹೊಡೆಯೋದ್ರಲ್ಲಿ ಕಾಲಹರಣ ಮಾಡುತ್ತಿದೆ ಎಂದು ದೂರಿದರು.

ನಳೀನ್ ಕುಮಾರ್ ಕಟೀಲ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಳೀನ್ ಕುಮಾರ್ ಕಟೀಲ್ ಒಬ್ಬ ವಿಧೂಷಕ. ಜೋಕರ್ ಇದ್ದ ಹಾಗೆ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

ಮಂಗಳಾ ಅಂಗಡಿ ಬಗ್ಗೆ ಸಿದ್ದರಾಮಯ್ಯ ಮಾತನಾಡಿ, ನಾನು ಮಂಗಳಾ ಅಂಗಡಿಯವರಿಗೆ ಅವಮಾನ ಮಾಡಿಲ್ಲ. ಸುರೇಶ್ ಅಂಗಡಿಯೇ ರಾಜ್ಯ ಸರ್ಕಾರಕ್ಕೆ ಬರಬೇಕಾದ ಹಣವನ್ನು ಕೇಳಿಲ್ಲ. ಇನ್ನೂ ಈ ಅಮ್ಮ ಎಲ್ಲಿ ಕೇಳ್ತಾರೆ ಎಂದು ಹೇಳಿದ್ದೆ ಅಷ್ಟೇ. ಸುರೇಶ್ ಅಂಗಡಿಗೆ 4 ಬಾರಿ ವೋಟ್ ಹಾಕಿದ್ದೀರಿ. ಈ ಬಾರಿ ಬದಲಾವಣೆ ಇರಲಿ ಎಂದು ಸತೀಶ್ ಜಾರಕಿಹೊಳಿಗೆ ವೋಟ್ ಹಾಕಿ ಎಂದಿದ್ದೆ. ಈ ಬಗ್ಗೆ ಜಗದೀಶ್ ಶೆಟ್ಟರ್ ಏನೇ ಹೇಳಬಹುದು. ಅದಕ್ಕೆಲ್ಲಾ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ನಾನು ಸ್ಟೇಟ್ ಮೆಂಟ್ ನೀಡುವುದು ಜನರಿಗೆ, ಶೆಟ್ಟರ್‍ ಗಳಲ್ಲ ಎಂದರು.

Comments

Leave a Reply

Your email address will not be published. Required fields are marked *