‘ಏಯ್ ಮುಚ್ಚು ಬಾಯಿ, ರಾ…’- ನಾಲಿಗೆ ಹರಿಬಿಟ್ಟ ಮಾಧುಸ್ವಾಮಿ

– ರೈತ ಸಂಘದ ಕಾರ್ಯಕರ್ತೆ ವಿರುದ್ಧ ಸಚಿವರ ಸಿಡಿಮಿಡಿ

ಕೋಲಾರ: ಕಾನೂನು, ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರು ರೈತ ಸಂಘದ ಕಾರ್ಯಕರ್ತರಿಗೆ ‘ಏಯ್ ಮುಚ್ಚು.. ಬಾಯಿ ರಾ…’ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟ ಪ್ರಸಂಗ ಇಂದು ಕೋಲಾರದಲ್ಲಿ ನಡೆದಿದೆ.

ಸಚಿವ ಮಾಧುದ್ವಾಮಿ ಅವರು ಕೆ.ಸಿ.ವ್ಯಾಲಿ ಸಂಬಂಧ ಕೆರೆಗಳ ವೀಕ್ಷಣೆಗೆ ಕೋಲಾರ ತಾಲೂಕಿನ ಎಸ್.ಅಗ್ರಹಾರ ಕರೆ ಬಳಿ ಬಂದಿದ್ದರು. ಈ ವೇಳೆ ಕೆರೆಗಳ ಒತ್ತುವರಿ ತೆರವು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತೆಯರು ಮನವಿ ಮಾಡಲು ಮುಂದಾಗಿದ್ದರು. ಇದರಿಂದ ಸಿಡಿಮಿಡಿಗೊಂಡ ಮಾಧುಸ್ವಾಮಿ ಅವರು ಅವಾಚ್ಯ  ಪದ ಬಳಕೆ ಮಾಡಿದ್ದಾರೆ.

ಇದರಿಂದ ಕೋಪಗೊಂಡ ಕಾರ್ಯಕರ್ತೆ “ಅದೇನ್ ಅಣ್ಣ ನೀವು ಹಿಂಗ ಮಾತಾಡ್ತಾ ಇದ್ದೀರಾ? ಕರೆಕ್ಟ್ ಆಗಿ ಮಾತಾಡಿ. ನೀವು ಹೀಗೆ ಮಾತ್ನಾಡೋದು ಸರಿನಾ” ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಕೂಡ ಮಧ್ಯೆ ಪ್ರವೇಶಿಸಿ ದರ್ಪ ಮೆರೆದಿದ್ದಾರೆ.

ಕೋಲಾರಕ್ಕೆ ನೀರು ಸರಿಯಾಗಿ ಸಿಗುತ್ತಿಲ್ಲ ಎಂದು ದೂರು ನೀಡಲು ಬಂದಿದ್ದೇವೆ. ಸಮಾಧಾನದಿಂದ ಸಚಿವರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ರೈತರ ಸಂಘದ ಕಾರ್ಯಕರ್ತರು ಹೇಳಿದರೂ ಕ್ಯಾರೆ ಎನ್ನದ ಪೊಲೀಸ್ ಅಧಿಕಾರಿಯೊಬ್ಬರು, “ನಿನ್ನ ಮಾತು ಜಾಸ್ತಿಯಾತ್ತು, ಸಣ್ಣ ವಿಷಯವನ್ನು ಬೆಳೆಸುತ್ತಿದ್ದೀಯ” ಎಂದು ಕಾರ್ಯಕರ್ತೆಯೊಬ್ಬರನ್ನ ಹಿಂದಕ್ಕೆ ನೂಕಿ ದರ್ಪ ಮೆರೆದಿದ್ದಾರೆ. ಸಚಿವರ ಹಾಗೂ ಪೊಲೀಸರ ನಡೆಯ ಬಗ್ಗೆ ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *