ಎಸ್‍ಪಿಬಿ ಕಳೆದುಕೊಂಡು ಸಾಂಸ್ಕೃತಿಕ ಲೋಕ ಬಡವಾಗಿದೆ- ಪ್ರಧಾನಿ ಮೋದಿ ಭಾವನಾತ್ಮಕ ಸಂದೇಶ

– ರಾಷ್ಟ್ರಪತಿ ಕೋವಿಂದ್, ಅಮಿತ್ ಶಾ ಸಂತಾಪ

ನವದೆಹಲಿ: ಗಾನಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ದೇಶದ ಗಣ್ಯಾತಿ ಗಣ್ಯರು ಸಂತಾಪ ಸೂಚಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದು, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆಕಸ್ಮಿಕ ನಿಧನದಿಂದಾಗಿ ನಮ್ಮ ಸಾಂಸ್ಕೃತಿಕ ಲೋಕ ತುಂಬಾ ಬಡವಾಗಿದೆ. ಭಾರತದಾದ್ಯಂತ ಪ್ರತಿ ಮನೆಯಲ್ಲಿಯೂ ಅವರ ಹೆಸರು, ಸುಮಧುರ ಧ್ವನಿ ಹಾಗೂ ಸಂಗೀತ ದಶಕಗಳಿಂದ ಪ್ರೇಕ್ಷರನ್ನು ಮೋಡಿ ಮಾಡಿತ್ತು. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ನನ್ನ ಸಂದೇಶವಿದೆ. ಓಂ ಶಾಂತಿ ಎಂದು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಸಹ ಟ್ವೀಟ್ ಮಾಡಿದ್ದು, ಸಂಗೀತ ದಂತಕಥೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅತ್ಯಂತ ಸುಮಧುರ ಧ್ವನಿಯನ್ನು ಕಳೆದುಕೊಂಡಿದ್ದೇವೆ. ಸಹಸ್ರ ಅಭಿಮಾನಿಗಳು ಅವರನ್ನು ‘ಹಾಡುವ ಚಂದ್ರ’ ಎಂದೇ ಕರೆಯುತ್ತಿದ್ದರು. ಪದ್ಮ ಭೂಷಣ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಲೆಜೆಂಡರಿ ಸಂಗೀತಗಾರ ಹಾಗೂ ಹಿನ್ನೆಲೆ ಗಾಯಕ ಪದ್ಮ ಭೂಷಣ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸಾವು ತುಂಬಾ ನೋವುಂಟು ಮಾಡಿದೆ. ಸುಮಧುರ ಧ್ವನಿ, ಸಾಟಿಯಿಲ್ಲದ ಸಂಗೀತ ಸಂಯೋಜನೆಗಳ ಮೂಲಕ ಅವರು ಶಾಶ್ವತವಾಗಿ ನಮ್ಮೊಂದಿಗೆ ಇರುತ್ತಾರೆ. ಅವರ ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ. ಹೀಗೆ ಹಲವು ಗಣ್ಯರು ಎಸ್‍ಪಿಬಿ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಅವರ ಸಂಗೀತ, ಅವರೊಟ್ಟಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *