‘ಎಲ್ಲ ಅವ್ರೆ ಸ್ವಾಮಿ, ಗಿಜಿಗಿಜಿ ಅಂತಾರೆ’- ಕೊರೊನಾ ಸೋಂಕಿತರ ಬಗ್ಗೆ ಸೋಮಣ್ಣ ನಿರ್ಲಕ್ಷ್ಯದ ಮಾತು

ತುಮಕೂರು: ಬೆಂಗಳೂರು ಕೋವಿಡ್ ಕೇಂದ್ರಗಳಲ್ಲಿ ಎಲ್ಲ ಅವ್ರೆ ಸ್ವಾಮಿ, ಏನ್ ಮಾಡೋದು, ಎಲ್ಲಿ ನೋಡಿದರೂ ಗಿಜಿಗಿಜಿ ಅಂತಾರೆ ಎಂದು ಕೊರೊನಾ ರೋಗಿಗಳ ಕುರಿತು ಸಚಿವ ವಿ.ಸೋಮಣ್ಣ ನಿರ್ಲಕ್ಷ್ಯವಾಗಿ ಮಾತಾಡಿದ್ದಾರೆ. ಇದಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ `ಕುರಿಮಂದೆ ಇದ್ದಂಗೆ ಇದ್ದಾರೆ ಸ್ವಾಮೀಜಿ, ಎಲ್ಲಿ ನೋಡಿದರೂ ಅವರೇ’ ಎಂದು ಸಚಿವರ ಮಾತಿಗೆ ದನಿಗೂಡಿಸಿದ್ದಾರೆ.

ಇಂದು ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯವರ ಜೊತೆ ಮಾತನಾಡಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಕೋವಿಡ್ ವಿಚಾರವಾಗಿ ತಾನು ಕೈಗೊಂಡಿರುವ ಕಾರ್ಯಗಳನ್ನು ವಿವರಿಸಿದ್ದಾರೆ. ಆ ಸಂದರ್ಭದಲ್ಲಿ ಈ ಮೇಲಿನ ನಿರ್ಲಕ್ಷ್ಯದ ಮಾತು ಆಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಬೆಂಗಳೂರಿನ 53 ವಾರ್ಡ್‍ಗಳಲ್ಲಿ 26 ಕಡೆ ಕೋವಿಡ್ ಆಸ್ಪತ್ರೆಗಳನ್ನು ತೆರೆದಿದ್ದೇನೆ. ದಿನದ 24 ಗಂಟೆ ಸಹಾಯವಾಣಿ, ಅಂಬುಲೆನ್ಸ್, ಒಂದು ಆಕ್ಸಿಜನ್ ಇದ್ದು ಎಲ್ಲಾ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದ್ದಾರೆ. ಆಗ ಮಾಜಿ ಸಚಿವ ಸೊಗಡು ಶಿವಣ್ಣ ಕುರಿಮಂದೆ ಇದ್ದಂಗೆ ಇದ್ದಾರೆ ಸ್ವಾಮೀಜಿ ಎಂದಿದ್ದಾರೆ. ಇದರಿಂದ ಉತ್ತೇಜನಗೊಂಡ ಸಚಿವ ಸೋಮಣ್ಣ `ಎಲ್ಲಾ ಅವ್ರೆ ಏನ್ ಮಾಡೋದು, ಗಿಜಿಗಿಜಿ ಅಂತಾರೆ ಸ್ವಾಮೀಜಿ’ ಎಂದು ಹೇಳಿದ್ದಾರೆ.

ಅಂಬುಲೆನ್ಸ್ ನವರು ಕೋವಿಡ್ ಸೋಂಕಿತರನ್ನು ಕರೆತರಲು 3000 ರೂಪಾಯಿ ಕೊಟ್ರೆ ಹೋಗೋದು. ಇಲ್ಲದಿದ್ದರೆ ಹೋಗೋದೇ ಇಲ್ಲ ಎಂದು ಸಚಿವ ಸೋಮಣ್ಣ ಅಸಹಾಯಕತೆ ವ್ಯಕ್ತಪಡಿಡಿದ್ದಾರೆ. ಪ್ರತಿ ವಾರ್ಡ್‍ನಲ್ಲಿರುವ ಕೌಂಟರ್ ಗೆ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿದ್ದೇನೆ. ಅವರು ಆಯಾ ವಾರ್ಡ್‍ನಷ್ಟೇ ನೋಡಿಕೊಳ್ಳುತ್ತಾರೆ. ಹೀಗಾಗಿ ಸೋಂಕು ಕಂಟ್ರೋಲ್‍ಗೆ ಬರುತ್ತಿದೆ ಎಂದು ಸ್ವಾಮೀಜಿಗೆ ಸೋಮಣ್ಣ ವಿವರಿಸಿದ್ದಾರೆ.

ಸೋಮವಾರ ಮಾಜಿ ಸಚಿವ ಜಾರ್ಜ್, ಕಾಂಗ್ರೆಸ್ ಮುಖಂಡ ಹ್ಯಾರಿಸ್ ಮತ್ತು ಶಾಸಕ ರಿಜ್ವನ್ ಅರ್ಷದ್, ಶ್ರೀನಿವಾಸಮೂರ್ತಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಸೋಂಕು ನಿಯಂತ್ರಣದ ಸಂಬಂಧ ಚರ್ಚೆಸಿದ್ದೇನೆ ಎಂದೂ ಸಹ ಸೋಮಣ್ಣ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *