ಎಲ್ಲೂ ಬೆಡ್ ಸಿಗ್ತಿಲ್ಲವೆಂದು ಪತ್ನಿ, ಮಕ್ಕಳ ಸಮೇತ ಸಿಎಂ ಮನೆ ಬಳಿ ಬಂದ ಸೋಂಕಿತ

– ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಆಸ್ಪತ್ರೆಗೆ ಸಾಗಣೆ

ಬೆಂಗಳೂರು: ನನಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಕರೆ ಮಾಡಿ ಮಾಹಿತಿ ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಎಲ್ಲೂ ಬೆಡ್ ಸಿಗುತ್ತಿಲ್ಲವೆಂದು ಕೊರೊನಾ ಸೋಂಕಿತರೊಬ್ಬರು ಸಿಎಂ ನಿವಾಸ ಕಾವೇರಿ ಬಳಿ ಗೋಳಿಟ್ಟಿದ್ದಾರೆ.

ಕುಟುಂಬ ಸಮೇತರಾಗಿ ಸಿಎಂ ಮನೆ ಬಳಿ ಬಂದ ಸೋಂಕಿತ, ನನಗೆ ಎಲ್ಲೂ ಬೆಡ್ ಸಿಗುತ್ತಿಲ್ಲ. ತುಂಬಾ ಸುಸ್ತು ಆಗುತ್ತಿದೆ, ನನಗೆ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿ ಎಂದು ತನ್ನ ಪತ್ನಿ ಹಾಗೂ ಮಕ್ಕಳ ಜೊತೆಯಲ್ಲಿ ಕೊರೊನಾ ಸೋಂಕಿತ ಕಾವೇರಿ ನಿವಾಸದ ಬಳಿ ಬಂದಿದ್ದಾರೆ. ಸೋಂಕಿತ ಬನಶಂಕರಿಯ ಅಂಬೇಡ್ಕರ್ ನಗರದ ಮೂಲದವರಾಗಿದ್ದು, ಚಿಕಿತ್ಸೆಗಾಗಿ ಪರದಾಡಿದ್ದಾರೆ.

ನನಗೆ ಕೊರೊನಾ ಸೋಂಕಿರುವುದು ದೃಢವಾಗಿದ್ದು, ಬೆಡ್ ಸಿಗುತ್ತಿಲ್ಲ. ಈ ಕುರಿತು ಕರೆ ಮಾಡಿ ಸಾಕಾಗಿದೆ, ಅಲೆದಾಡಿ ಆಗಿದೆ. ಬೆಡ್ ಖಾಲಿ ಇಲ್ಲ, ನಾನು ಎಲ್ಲಿ ದಾಖಲಾಗಲಿ ಎಂದು ಸೋಂಕಿತ ಪ್ರಶ್ನಿಸಿದ್ದಾರೆ. ಇವರ ಜೊತೆ ಪತ್ನಿ ಹಾಗೂ ಮಕ್ಕಳು ಇದ್ದು, ಮಕ್ಕಳಿಗೆ ಸೋಂಕು ತಗುಲಿದರೆ ಏನು ಗತಿ ಎಂಬ ಭಯ ಇದೀಗ ಕಾಡುತ್ತಿದೆ.

ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ, ಸಿಎಂ ಮನೆ ಬಳಿ ಆಸ್ಪತ್ರೆಗೆ ಸೇರಲು ಗೋಳಿಟ್ಟ ಬಳಿಕ ಸೋಂಕಿತನನ್ನು ಪೊಲೀಸರು ಕೆ.ಸಿ.ಜನರಲ್ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕಳುಹಿಸಿ ಕೊಡಲಾಗಿದೆ. ಬೆಡ್ ಸಿಗುತ್ತಿಲ್ಲ ಎಂಬ ಹಲವು ಪ್ರಕರಣಗಳು ಪತ್ತೆಯಾಗುತ್ತಿದ್ದು, ಸರ್ಕಾರ 10 ಸಾವಿರ ಬೆಡ್ ವ್ಯವಸ್ಥೆ ಮಾಡಿದೆ ಎಂದು ಸಚಿವರು ಹೇಳುತ್ತಾರೆ. ಆದರೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಂಡಿದೆ, ಯಾವ ರೀತಿಯ ಆಸ್ಪತ್ರೆ ವ್ಯವಸ್ಥೆ ಮಾಡಿದೆ ಎಂಬ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ. ಜನ ಭಯ ಪಡುವಂತಾಗಿದೆ.

Comments

Leave a Reply

Your email address will not be published. Required fields are marked *