ಎತ್ತಣ ಮಾಮರ, ಎತ್ತಣ ಕೋಗಿಲೆ- ಜಮೀರ್ ಹೇಳಿಕೆಗೆ ಹೆಚ್‍ಡಿಕೆ ತಿರುಗೇಟು

-ಕದ್ದುಮುಚ್ಚಿ ಕೊಲಂಬೋ ಯಾತ್ರೆ ಮಾಡಿರಲಿಲ್ಲ

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. 2014ರಲ್ಲಿ ಜೆಡಿಎಸ್ ಶಾಸಕರು ಪ್ರವಾಸಕ್ಕೆ ಕದ್ದುಮುಚ್ಚಿ ಹೋಗಿರಲಿಲ್ಲ ಎಂದು ಹೇಳಿದ್ದಾರೆ.

ಡ್ರಗ್ಸ್ ಮಾಫಿಯಾದಲ್ಲಿ ನಟಿ ಸಂಜನ ಗಲ್ರಾಣಿ ಹೆಸರಿನ ಜೊತೆ ಶಾಸಕ ಜಮೀರ್ ಶ್ರೀಲಂಕಾದ ಕೊಲಂಬೋದ ಕ್ಯಾಸಿನೋಗೆ ಹೋಗಿರುವ ಆರೋಪಗಳ ಕೇಳಿ ಬಂದಿದ್ದವು. ತಮ್ಮ ವಿರುದ್ಧ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದ ಜಮೀರ್ ಅಹ್ಮದ್, 2014ರಲ್ಲಿ ಜೆಡಿಎಸ್ ಶಾಸಕರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಜೊತೆ ಪ್ರವಾಸ ಕೈಗೊಂಡಿರುವ ವಿಷಯವನ್ನ ಎಳೆದು ತಂದಿದ್ದರು. ಈ ಹಿನ್ನೆಲೆ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು ಹೆಸರು ಹೇಳದೇ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ವಾಚ್‍ಮ್ಯಾನ್ ಆಗ್ಲಿಲ್ಲ, ಇನ್ನೂ ಆಸ್ತಿ ಬರ್ದು ಕೊಡ್ತೀರಾ -ಜಮೀರ್‌ಗೆ ಕುಟುಕಿದ ರಾಮದಾಸ್

ಹೆಚ್‍ಡಿಕೆ ಟ್ವೀಟ್: ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಶ್ರೀಲಂಕಾದ ಕೊಲಂಬೋಗೆ ಒಮ್ಮೆ ಪ್ರವಾಸ ಹೋಗಿದ್ದು ನಿಜ. ಆದರೆ, ಕದ್ದು ಮುಚ್ಚಿ ‘ಕೊಲಂಬೋ ಯಾತ್ರೆ’ ಮಾಡಿರಲಿಲ್ಲ. ಇದನ್ನೂ ಓದಿ: ನಟಿ ಸಂಜನಾ ಸೇರಿ ಉಳಿದ ಆರೋಪಿಗಳೂ 3 ದಿನ ಸಿಸಿಬಿ ಕಸ್ಟಡಿಗೆ

ಒಂದಾನೊಂದು ಕಾಲದಲ್ಲಿ ನಮ್ಮ ಪಕ್ಷದಲ್ಲಿದ್ದ ರಾಜಕಾರಣಿಯೊಬ್ಬರು ಜೆಡಿಎಸ್ ಶಾಸಕರು ಮತ್ತು ನಾನು ಕೊಲಂಬೋ ಪ್ರವಾಸ ಕೈಗೊಂಡಿದ್ದಾಗಿ ನೀಡಿರುವ ಹೇಳಿಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತಿದೆ. 2014ರ ಜೂನ್ ತಿಂಗಳಲ್ಲಿ ಪಕ್ಷ ಸಂಘಟನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಕೊಲಂಬೋಗೆ ಪ್ರವಾಸ ಹೋಗುವುದಾಗಿ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿ ಹೋಗಿದ್ದಲ್ಲದೇ, ಅಲ್ಲಿ ನಡೆದ ಶಾಸಕರ ಜೊತೆಗಿನ ಚರ್ಚೆಯ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆವು. ಇದರಲ್ಲಿ ಯಾವುದೇ ಗುಟ್ಟು ಇರಲಿಲ್ಲ. ಇದನ್ನೂ ಓದಿ: ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗ್ ಅಲ್ಲ: ಶಾಸಕ ಜಮೀರ್‌ಗೆ ಸಚಿವ ಸುಧಾಕರ್ ಟಾಂಗ್

ನೆರೆಯ ರಾಜ್ಯ ಗೋವಾ ಇಲ್ಲವೇ ರಾಜ್ಯದ ರೆಸಾರ್ಸ್ ನಲ್ಲಿ ಸಭೆ ನಡೆಸುವುದಕ್ಕಿಂತ ಯಾವುದೇ ಅಡಚಣೆ ಇಲ್ಲದೆ ಶಾಸಕರೊಂದಿಗೆ ಮುಕ್ತವಾಗಿ ಚರ್ಚಿಸಲು ಕೊಲಂಬೋ ಪ್ರವಾಸ ದುಬಾರಿಯಲ್ಲ ಎಂಬ ಕಾರಣಕ್ಕೆ ಇಂತಹ ಸಭೆ ನಡೆಸಿದ್ದು ನಿಜ. ವಿಮಾನ ಹತ್ತುವಾಗಲೂ ಮತ್ತು ವಾಪಸು ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೇನೆ. ಕೊಲಂಬೋ ಪ್ರಯಾಣ ಅದೇ ಮೊದಲು ಮತ್ತು ಕೊನೆ. ಇದರಲ್ಲಿ ಬಚ್ಚಿಡುವುದು ಏನೇನೂ ಇಲ್ಲ. ಅವರು ನಮ್ಮೊಂದಿಗೆ ಬಂದಿದ್ದರೆ ಹೊರತು ನಾವು ಅವರೊಂದಿಗೆ ಹೋಗಿರಲಿಲ್ಲ. ಇದನ್ನೂ ಓದಿ:  ಡ್ರಗ್ಸ್ ಪ್ರಕರಣದ 5ನೇ ಆರೋಪಿ, ಚಿನ್ನ ವ್ಯಾಪಾರಿಯ ಪುತ್ರ ಬಂಧನ

ಆಚಾರವಿಲ್ಲದ ನಾಲಿಗೆ ನಿನ್ನ, ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದುಶಿಸುವುದಕ್ಕೆ, ಚಾಚಿ ಕೊಂಡಿರುವಂತ ನಾಲಿಗೆ, ಸತತವು ನುಡಿ ಕಂಡ್ಯ ನಾಲಿಗೆ, ಚಾಡಿ ಹೇಳಲು ಬೇಡ ನಾಲಿಗೆ ಪುರಂದರ ದಾಸರು. ಇದನ್ನೂ ಓದಿ: ಹಿಂದೆ ಹೇಳಿದ್ದ 3 ಸ್ಫೋಟಕ ಒಗಟುಗಳಲ್ಲಿ ಮೂರು ಸತ್ಯವಾಗಿದೆ – ಪ್ರಶಾಂತ್‌ ಸಂಬರಗಿ

ಜಮೀರ್ ಅಹ್ಮದ್ ಹೇಳಿದ್ದೇನು?: ಶ್ರೀಲಂಕಾದ ಕೊಲಂಬೋಗೆ ಹೋಗಿದ್ದು ನಿಜ. ಕೊಲಂಬೋಗೆ ಹೋದ್ರೇ ತಪ್ಪಾ? ಕೊಲಂಬೋಗೆ ಹೊರಬಾರದು ಅಂತ ಇಂಡಿಯಾದಲ್ಲಿ ಬ್ಯಾನ್ ಆಗಿದೆಯಾ? ನಾನೇನು ಪಾಕಿಸ್ತಾನಕ್ಕೆ ಹೋಗಿದ್ನಾ? ಪ್ರತಿ ಒಂದೂವರೆ ವರ್ಷಕ್ಕೊಮ್ಮೆ ಕೊಲಂಬೋಗೆ ಹೋಗುತ್ತಿದ್ದೆ. ನಾನು ಮಾತ್ರವಲ್ಲ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಹೋಗಿದ್ದರು. ಜೆಡಿಎಸ್‍ನ 28 ಶಾಸಕರೂ ಹೋಗಿದ್ದರು. ಡ್ರಗ್ಸ್ ನಂಟು ಸಾಬೀತಾದ್ರೆ ಬೇಕಾದರೆ ಗಲ್ಲಿಗೇರಿಸಲಿ ಎಂದು ಹೇಳಿದ್ದರು. ಇದನ್ನೂ ಓದಿ: ಸಂಜನಾ ಜೊತೆ ಕೊಲಂಬೋಗೆ ಹೋಗಿದ್ದು ಸಾಬೀತಾದ್ರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡ್ತೀನಿ: ಜಮೀರ್

Comments

Leave a Reply

Your email address will not be published. Required fields are marked *