ಎಚ್ಚೆತ್ತುಕೊಳ್ಳದಿದ್ದರೆ ಲಾಕ್‍ಡೌನ್ ಮಾಡಬೇಕಾಗುತ್ತೆ- ಸುಧಾಕರ್ ಎಚ್ಚರಿಕೆ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಹಲವು ಪ್ರದೇಶಗಳಲ್ಲಿ ಲಾಕ್‍ಡೌನ್ ಮಾಡಲಾಗುತ್ತಿದೆ. ಅದೇ ರೀತಿ ಇದೀಗ ರಾಜ್ಯದಲ್ಲೂ ಮತ್ತೆ ಲಾಕ್‍ಡೌನ್ ಜಾರಿಯಾಗುತ್ತಾ ಎಂಬ ಆತಂಕ ಎದುರಾಗಿದೆ. ಈ ಕುರಿತು ಸ್ವತಃ ಆರೋಗ್ಯ ಸಚಿವ ಡಾ.ಸುಧಾಕರ್ ಸುಳಿವು ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿದ್ದು, ಪ್ರತಿ ದಿನ 2 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಜನ ಅರ್ಥಮಾಡಿಕೊಂಡು ಎಚ್ಚೆತ್ತುಕೊಂಡರೆ ಒಳ್ಳೆಯದು. ಇಲ್ಲವಾದಲ್ಲಿ ಲಾಕ್‍ಡೌನ್ ಮಾಡಬೇಕಾಗುತ್ತೆ ಎಂದು ಸಚಿವ ಸುಧಾಕರ್ ಮತ್ತೊಮ್ಮೆ ಲಾಕ್‍ಡೌನ್ ವಾರ್ನಿಂಗ್ ಕೊಟ್ಟಿದ್ದಾರೆ.

ಸದ್ಯ ಕೇಂದ್ರದ ಆದೇಶದಂತೆ ಕಂಟೈನ್‍ಮೆಂಟ್ ಝೋನ್ ಜಾರಿ ಮಾಡಲಾಗುತ್ತಿದ್ದು, ಲಾಕ್‍ಡೌನ್ ಮಾಡುವ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ. ಜಾತ್ರೆ, ಸಭೆ, ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ಎಚ್ಚರ ವಹಿಸಿ, ಜವಾಬ್ದಾರಿಯಿಂದ ನಡೆದುಕೊಳ್ಳಿ. ಲಾಕ್‍ಡೌನ್ ಮಾಡಲು ನಮಗೆ ಖುಷಿ ಇಲ್ಲ, ಅದು ನಮ್ಮ ಉದ್ದೇಶವಲ್ಲ. ಆದರೆ ಕೊರೊನಾ ವೈರಸ್ ನಿಯಂತ್ರಿಸಲು ಜನರ ಸಹಕಾರ ಅಗತ್ಯ ಎಂದು ತಿಳಿಸಿದ್ದಾರೆ.

ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಕಂಟ್ರೋಲ್ ತಪ್ಪಿದ್ದು, ಹಂತ ಹಂತವಾಗಿ ಲಾಕ್‍ಡೌನ್ ಜಾರಿ ಮಾಡಲಾಗುತ್ತಿದೆ. ಒಂದೊಂದೇ ಜಿಲ್ಲೆಯನ್ನು ಲಾಕ್ ಮಾಡಲಾಗುತ್ತಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿದರೆ ರಾಜ್ಯಕ್ಕೂ ಇದೇ ಪರಿಸ್ಥಿತಿ ಬರಲಿದೆಯಾ ಎಂಬ ಆತಂಕ ಎದುರಾಗಿದೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆ ಮಾ.26ರಿಂದ ಏ.4ವರೆಗೆ, ನಾಗ್ಪುರ ಜಿಲ್ಲೆ ಮಾ.31ವರೆಗೆ ಟಫ್ ರೂಲ್ಸ್, ಸಂಜೆ 4ಕ್ಕೆ ಅಂಗಡಿಗಳು ಕ್ಲೋಸ್, ರಾತ್ರಿ 7ಕ್ಕೆ ಹೋಟೆಲ್‍ಗಳು ಬಂದ್. ನಾಂದೇಡ್, ಪರಬಾನಿ ಜಿಲ್ಲೆಯಲ್ಲಿ ಇಂದಿನಿಂದ 31ವರೆಗೆ ನೈಟ್‍ ಕರ್ಫ್ಯೂ ಜಾರಿ ಮಾಡಲಾಗಿದೆ. ಮಹಾರಾಷ್ಟ್ರದ ಒಟ್ಟು 10 ಜಿಲ್ಲೆಗಳಲ್ಲಿ ನೈಟ್‍ ಕರ್ಫ್ಯೂ ಜಾರಿ ಮಾಡಲಾಗಿದ್ದು, ಅಮರಾವತಿ, ಔರಂಗಬಾದ್‍ಗಳಲ್ಲಿ ಸಹ ನೈಟ್ ಕರ್ಫ್ಯೂ ಜಾರಿಯಲ್ಲಿದೆ.

Comments

Leave a Reply

Your email address will not be published. Required fields are marked *