ಋತುಚಕ್ರದ ಬಗ್ಗೆ ಶ್ರದ್ಧಾ ಶ್ರೀನಾಥ್ ಬೋಲ್ಡ್ ಹೇಳಿಕೆ

– ಋತುಚಕ್ರ ಆದಾಗ ಪೂಜೆಯಲ್ಲಿ ಪಾಲ್ಗೊಂಡಿದ್ದೆ

ಬೆಂಗಳೂರು: ಸಾಮಾನ್ಯವಾಗಿ ಅನೇಕ ಮಹಿಳೆಯರು ಋತುಚಕ್ರದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಸ್ಯಾಂಡಲ್‍ವುಡ್ ನಟಿ ಶ್ರದ್ಧಾ ಶ್ರೀನಾಥ್ ಈ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಾರೆ.

ನಟಿ ಶ್ರದ್ಧಾ ಶ್ರೀನಾಥ್ ಸಾಮಾಜಿಕ ಜಾಲತಾಣದಲ್ಲಿ ಋತುಚಕ್ರದ ಬಗ್ಗೆ ಬೋಲ್ಡ್ ಹೇಳಿಕೆಯೊಂದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಶ್ರದ್ಧಾ 14ನೇ ವಯಸ್ಸಿನಲ್ಲಿಯೇ ಸ್ತ್ರೀವಾದಿಯಾದ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಬಹಿರಂಗವಾಗಿ ಬರೆದುಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
“ಆಗ ನನಗೆ 14 ವರ್ಷ ವಯಸ್ಸು. ಈ ವೇಳೆ ನಮ್ಮ ಮನೆಯಲ್ಲಿ ದೇವರ ಪೂಜೆಯಲ್ಲಿ ನಡೆಯುತ್ತಿತ್ತು. ಆ ಪೂಜೆಯಲ್ಲಿ ನಾನು ಪಾಲ್ಗೊಂಡಿದ್ದೆ. ಆದರೆ ಆಗಲೇ ನನಗೆ ಪೀರಿಯಡ್ಸ್ ಆಯಿತು. ಆಗ ಅಮ್ಮ ನನ್ನ ಜೊತೆಯಲ್ಲಿ ಇರಲಿಲ್ಲ. ಆದ್ದರಿಂದ ನಾನು ನನ್ನ ಪಕ್ಕದಲ್ಲಿದ್ದ ಚಿಕ್ಕಮ್ಮನಿಗೆ ಈ ವಿಚಾರವನ್ನು ತಿಳಿಸಿದೆ. ಯಾಕೆಂದರೆ ನಾನು ಆ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಕೂಡ ಧರಿಸಿರಲಿಲ್ಲ” ಎಂದು ಅನೇಕ ವರ್ಷಗಳ ಹಿಂದೆ ನಡೆದಿದ್ದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಈ ವೇಳೆ ಪಕ್ಕದಲ್ಲೇ ಇನ್ನೊಬ್ಬ ಒಳ್ಳೆಯ ಮಹಿಳೆ ಕುಳಿತಿದ್ದರು. ನಾನು ಚಿಂತೆಯಿಂದ ಚಿಕ್ಕಮ್ಮನಿಗೆ ಹೇಳಿದ ಮಾತನ್ನು ಅವರು ಕೇಳಿಸಿಕೊಂಡಿದ್ದರು. ಆಗ ಮಹಿಳೆ ನನ್ನ ಕಡೆ ನೋಡಿ ಧೈರ್ಯದಿಂದ ನಗುತ್ತಾ “ಪರವಾಗಿಲ್ಲ ಚಿನ್ನ, ದೇವರು ಕ್ಷಮಿಸುತ್ತಾರೆ. ಪೂಜೆ ಸಂದರ್ಭದಲ್ಲಿ ಋತುಚಕ್ರ ಆಗಿದ್ದಕ್ಕೆ ನೀನು ಚಿಂತಿಸಬೇಡ” ಎಂದು ಹೇಳಿದರು. ಆ ದಿನವೇ ನಾನು ಮಹಿಳಾವಾದಿ ಆದೆ. ಅಲ್ಲದೇ ಪೀರಿಯಡ್ಸ್ ಬಗ್ಗೆ ತಪ್ಪು ಕಲ್ಪನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿದೆ. ಆಗ ನನಗೆ 14ರ ಪ್ರಾಯ ಎಂದು ಶ್ರದ್ಧಾ ಶ್ರೀನಾಥ್ ಬರೆದುಕೊಂಡಿದ್ದಾರೆ.

ಶ್ರದ್ಧಾ ಶ್ರೀನಾಥ್ ಈ ಬಗ್ಗೆ ಧೈರ್ಯವಾಗಿ ಮಾತನಾಡಿದ್ದಕ್ಕೆ ಅನೇಕರು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಶ್ರದ್ಧಾ ‘ಯು ಟರ್ನ್’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಖ್ಯಾತಿ ಪಡೆದುಕೊಂಡಿದ್ದು, ನಂತರ ತೆಲುಗು, ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಸದ್ಯಕ್ಕೆ ನಟ ಸತೀಶ್ ನೀನಾಸಂ ಜೊತೆ ‘ಗೋದ್ರಾ’ ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

https://www.instagram.com/p/CAzYujDlk6l/?utm_source=ig_embed

Comments

Leave a Reply

Your email address will not be published. Required fields are marked *