ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು, ಕೊಡಗಿನಲ್ಲಿ ಕೊರೊನಾಗೆ ಮೊದಲ ಬಲಿ?

ಮಡಿಕೇರಿ: ಉಸಿರಾಟದ ತೊಂದರೆಯಿಂದ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದ 58 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಕೊಡಗಿನಲ್ಲಿ ಕೊರೊನಾಗೆ ಮೊದಲ ವ್ಯಕ್ತಿ ಬಲಿಯಾದರಾ ಎಂಬ ಅನುಮಾನ ಇದೀಗ ಮೂಡಿದೆ.

ಕೊಡಗು ಜಿಲ್ಲೆಯ ಕುಶಾಲನಗರದ 58 ವರ್ಷದ ವ್ಯಕ್ತಿಯೊಬ್ಬರು ಕಳೆದ 7 ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಅಧಿಕ ರಕ್ತದೊತ್ತಡ ಮತ್ತು ಡಯಾಬಿಟೀಸ್ ನಂತಹ ಖಾಯಿಲೆಗಳೂ ಇದ್ದವು. ಅಲ್ಲದೆ ತೀವ್ರ ಉಸಿರಾಟದ ತೊಂದರೆ ಇದ್ದಿದ್ದರಿಂದ ವ್ಯಕ್ತಿಯನ್ನು ವಾರದ ಹಿಂದೆ ಮಡಿಕೇರಿಯಲ್ಲಿ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ.

ಕೊರೊನಾದ ರೋಗ ಲಕ್ಷಣಗಳು ಇದ್ದಿದ್ದರಿಂದ ವ್ಯಕ್ತಿಯ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿಲ್ಲ. ಬದಲಾಗಿ ಜಿಲ್ಲಾಡಳಿತವೇ ಸರ್ಕಾರದ ಮಾರ್ಗ ಸೂಚಿ ಪ್ರಕಾರ ಮಡಿಕೇರಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದೆ. ಅಂತ್ಯ ಸಂಸ್ಕಾರದಲ್ಲಿ ಮೃತ ವ್ಯಕ್ತಿಯ ಪುತ್ರ ಸೇರಿದಂತೆ ಕೇವಲ ನಾಲ್ಕು ಜನ ಸಂಬಂಧಿಕರು ಮಾತ್ರ ಭಾಗವಹಿಸಿದ್ದರು. ಮೃತ ವ್ಯಕ್ತಿಯ ಗಂಟಲು ದ್ರವವನ್ನು ವೈದ್ಯರು ಸಂಗ್ರಹಿಸಿ ಕೊರೊನಾ ಟೆಸ್ಟ್ ಲ್ಯಾಬ್‍ಗೆ ಕಳುಹಿಸಿದ್ದು, ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.

ಒಂದು ವೇಳೆ ಕೋವಿಡ್-19 ಟೆಸ್ಟ್ ನಲ್ಲಿ ಪಾಸಿಟಿವ್ ಬಂದಲ್ಲಿ ಕೊಡಗಿನಲ್ಲಿ ಕೊರೊನಾ ಮಹಾಮಾರಿಯ ಮೊದಲ ಬಲಿ ಇದಾಗಲಿದೆ. ಅದೃಷ್ಟವಶಾತ್ ನೆಗೆಟಿವ್ ಬಂದಲ್ಲಿ ಕೊಡಗಿನ ಜನರು ಕೊಂಚ ನಿಟ್ಟುಸಿರುವ ಬಿಡಲಿದ್ದಾರೆ.

Comments

Leave a Reply

Your email address will not be published. Required fields are marked *