ಉಡುಪಿಯಲ್ಲಿ ಮುಂದುವರಿದ ಮಳೆ – ಒತ್ತಿನೆಣೆ ಗುಡ್ಡ ಕುಸಿತ

ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಮಳೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಹವಾಮಾನ ಇಲಾಖೆ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಮಳೆ ಮುಂದುವರಿಯಲಿದೆ.

ಕಳೆದ ಒಂದು ವಾರದಿಂದ ನಿರಂತರ ಮಳೆ ಆಗುತ್ತಿರುವುದರಿಂದ, ಬೈಂದೂರಿನ ಒತ್ತಿನೆಣೆ ಗುಡ್ಡ ತೇವಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 66 ರ ಮೇಲೆ ಮಣ್ಣು ಕುಸಿದಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯ್ತು.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ಗುಡ್ಡ ಕೊರೆಯಲಾಗಿತ್ತು. ಸತತವಾಗಿ ಸುರಿದ ಮಳೆಯ ಹಿನ್ನೆಲೆಯಲ್ಲಿ ಜೇಡಿಮಣ್ಣು ಗುಡ್ಡದ ಕೆಲವು ಭಾಗ ಕುಸಿತವಾಗುತ್ತಾ ಹೋಗುತ್ತಿದೆ. ಕಳೆದ ಬಾರಿ ಮಳೆಗಾಲದಲ್ಲೂ ಕೂಡ ಇದೇ ಭಾಗದಲ್ಲಿ ರಸ್ತೆ ಪಕ್ಕದ ಗುಡ್ಡ ಕುಸಿದಿತ್ತು. ಕಾಂಕ್ರೀಟ್ ತಡೆಗೋಡೆ ಕಟ್ಟಿದರೂ ನಿರಂತರ ಗುಡ್ಡದ ಮಣ್ಣು ರಸ್ತೆಗೆ ಕುಸಿಯುವುದು ಮುಂದುವರಿದಿದೆ. ಸದ್ಯ ಗುತ್ತಿಗೆದಾರ ಐಆರ್ ಬಿ ಕಂಪನಿಯಿಂದ ಕುಸಿದ ಗುಡ್ಡದ ಮಣ್ಣು ತೆರವು ಕಾರ್ಯ ನಡೆದಿದೆ. ಇದನ್ನೂ ಓದಿ: ಕಾಡುಕೋಣದ ಜೊತೆ ಕಾದಾಡಿ ಪ್ರಾಣ ಬಿಟ್ಟ ಹುಲಿ

ಒತ್ತಿನೆಣೆ ಜೇಡಿ ಮಣ್ಣಿನಿಂದ ಕೂಡಿದ ಬೆಟ್ಟ. ಬೆಟ್ಟ ಕೊರೆದು ರಾಷ್ಟ್ರೀಯ ಹೆದ್ದಾರಿ ಮಾಡಿದ್ದೇ ಮೊದಲ ತಪ್ಪು. ಪ್ರತಿ ಮಳೆಗಾಲದಲ್ಲಿ ಗುಡ್ಡ ಬೇರೆ ಬೇರೆ ಭಾಗಗಳಲ್ಲಿ ಕುಸಿತ ಆಗುತ್ತದೆ ಇರುತ್ತದೆ. ಒತ್ತಿನೆಣೆ ಬೆಟ್ಟ ಸಂಪೂರ್ಣ ನೆಲಸಮ ಆಗುವವರೆಗೆ ಈ ಸಮಸ್ಯೆ ಇದ್ದದ್ದೇ. ರಾಷ್ಟ್ರೀಯ ಹೆದ್ದಾರಿ ಅಗಲ ಮಾಡುವಾಗ ಎಂಜಿನಿಯರ್ ಗಳು ಈ ಬಗ್ಗೆ ಸರಿಯಾಗಿ ಸರ್ಕಾರಕ್ಕೆ ಮಾಹಿತಿ ಕೊಟ್ಟಿದ್ದರೆ ಇಂತಹ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಪ್ರತಿನಿತ್ಯ ಈ ರಸ್ತೆಯಲ್ಲಿ ಪ್ರಯಾಣಿಸುವ ಪ್ರವೀಣ್ ಕುಂದಾಪುರ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *