ಉಡುಪಿಯಲ್ಲಿ ಬಿರುಸಿನ ಮುಂಗಾರು- ತಿಂಗಳಾಂತ್ಯದವರೆಗೆ ಭಾರೀ ಮಳೆ ಮುನ್ಸೂಚನೆ

ಉಡುಪಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದೆ. ಬೆಳಗ್ಗೆಯಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ತಿಂಗಳಾಂತ್ಯದವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ನಾಲ್ಕು ದಿನದಿಂದ ಮುಂಗಾರಿನ ಅಬ್ಬರ ಕ್ಷೀಣವಾಗಿತ್ತು. ಜಿಲ್ಲೆಯ ಕೆಲವೆಡೆ ತುಂತುರು ಮಳೆ ಸುರಿಯುತ್ತಿತ್ತು. ಇಂದು ಮುಂಜಾನೆಯಿಂದ ಜಿಲ್ಲೆಯಾದ್ಯಂತ ವರ್ಷಧಾರೆ ಆಗುತ್ತಿದೆ. ಕಳೆದ ರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಇದನ್ನೂ ಓದಿ: ಕೊಡಗು: ನಾಲ್ಕೈದು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಅರಂಭ

ಇಂದು ಮುಂಜಾನೆಯಿಂದಲೇ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದೆ. ನಗರದ ಹೊರಭಾಗದಲ್ಲೂ ನಿರಂತರ ಮಳೆಯಾಗುತ್ತಿದೆ. ಜಿಲ್ಲೆಯ ಕರಾವಳಿ ತಾಲೂಕುಗಳಾಗಿರುವ ಕಾಪು, ಉಡುಪಿ, ಕುಂದಾಪುರ, ಬೈಂದೂರಿನಲ್ಲಿ ಗಾಳಿ ಸಹಿತ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸಹ ಬಿರುಸಿನ ಮಳೆ ಸುರಿಯುತ್ತಿದ್ದು, ಕಾರ್ಕಳ, ಕುಂದಾಪುರ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ.

ಬೇಸಾಯಗಾರರು ಈಗಾಗಲೇ ಬಿತ್ತನೆ, ನಾಟಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಈ ವರ್ಷ ಸಮ ಪ್ರಮಾಣದ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ಸೂಚನೆ ಪ್ರಕಾರ ತಿಂಗಳ ಅಂತ್ಯದವರೆಗೂ ಜಿಲ್ಲೆಯಲ್ಲಿ ಮಳೆ ಆಗಲಿದೆ.

Comments

Leave a Reply

Your email address will not be published. Required fields are marked *