ಈ ಬಾರಿ ಹುಟ್ಟುಹಬ್ಬ ಆಚರಿಸಲ್ಲ, ಮಾ.20ಕ್ಕೆ ಮೈಸೂರಲ್ಲಿ ಸಿಗೋಣ: ಪುನೀತ್

ಬೆಂಗಳೂರು: ಕೊರೊನಾ ಹಿನ್ನೆಲೆ ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದಿಲ್ಲ ಎಂದು ನಟ ಪುನೀತ್ ರಾಜ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ, ದಯವಿಟ್ಟು ಯಾರೂ ಮನೆಗೆ ಬರಬೇಡಿ. ಮಾರ್ಚ್ 20ರಂದು ಮೈಸೂರಿನಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ ಅಲ್ಲಿಯೇ ಸಿಗೋಣ ಎಂದು ಹೇಳಿದ್ದಾರೆ.

ಹುಟ್ಟುಹಬ್ಬದ ದಿನ ನಾನು ಮನೆಯಲ್ಲಿ ಇರುವುದಿಲ್ಲ. ನಾವು ಕುಟುಂಬಸ್ಥರೆಲ್ಲ ಸೇರಿ ದೇವಸ್ಥಾನಕ್ಕೆ ಹೋಗೋಣ ಎಂದುಕೊಂಡಿದ್ದೇವೆ. ಹೀಗಾಗಿ ಅಲ್ಲಿಂದ ಮುಗಿಸಿ ಬಂದಮೇಲೆ ಒಟ್ಟಿಗೆ ಮಾರ್ಚ್ 20ಕ್ಕೆ ಮೈಸೂರಲ್ಲಿ ಸಿಗೋಣ ಎಂದು ಹುಟ್ಟುಹಬ್ಬ ಆಚರಿಸಿಕೊಳ್ಳುವ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ.

ಜನ ಈಗೀಗ ಚಿತ್ರಮಂದಿರಕ್ಕೆ ಬರೋಕೆ ಶುರು ಮಾಡಿದ್ದಾರೆ. ನಮ್ಮ ಚಿತ್ರ ಏಪ್ರಿಲ್ 1ಕ್ಕೆ ತೆರೆಗೆ ಬರುತ್ತಿರುವುದು ಖುಷಿ ವಿಷಯ. ಯುವರತ್ನ ಸಿನಿಮಾ ಯುವಕರಿಗೆ, ವಿದ್ಯಾರ್ಥಿಗಳಿಗೆ ಸಂದೇಶ ಇರುವ ಚಿತ್ರವಾಗಿದೆ. ಜೀವನದ ಮೌಲ್ಯ ಈ ಚಿತ್ರದಲ್ಲಿದೆ ಎಂದು ಪುನೀತ್ ರಾಜ್‍ಕುಮಾರ್ ವಿವರಿಸಿದರು.

ಪೈರಸಿ ಬಗ್ಗೆ ಮಾತನಾಡಿದ ಅಪ್ಪು, ಪೈರಸಿ ತಂತ್ರಜ್ಞಾನ ಜೋರಾಗಿಬಿಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಾವೇ ಬದಲಾಗಬೇಕು, ಈ ರೀತಿ ಮಾಡುವವರು ಯಾರಾದರೂ ಕಂಡುಬಂದರೆ ಜನರೇ ನೋಟಿಸ್ ಮಾಡಿ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ತಿಳಿಸಿದರು.

ಮಾರ್ಚ್ 20ರಂದು ಮೈಸೂರಿನಲ್ಲಿ ಪ್ರಿ ರಿಲೀಸ್ ಇವೆಂಟ್ ನಡೆಯುತ್ತಿದ್ದು, ಮಹಾರಾಜಾ ಗ್ರೌಂಡ್ ನಲ್ಲಿ ‘ಯುವ ಸಂಭ್ರಮ’ ಹೆಸರಿನಲ್ಲಿ ಕಾರ್ಯಕ್ರಮ ಇರಲಿದೆ. 27ರಂದು ಹೈದ್ರಾಬಾದ್‍ನಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. 17 ರಂದು ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಸರ್ಪ್ರೈಸ್ ಟೀಸರ್ ಕೂಡ ರಿಲೀಸ್ ಆಗುತ್ತೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.

Comments

Leave a Reply

Your email address will not be published. Required fields are marked *