ಈ ಬಾರಿ ಮಂತ್ರಿ ಆಗುತ್ತೇನೆ ಎಂಬ ವಿಶ್ವಾಸ ನನಗಿದೆ: ಯೋಗೇಶ್ವರ್

ಬೆಂಗಳೂರು: ನನಗೆ ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಯಾರನ್ನು ಸಚಿವರನ್ನಾಗಿ ಮಾಡಬೇಕೆಂದು ಹೈಕಮಾಂಡ್, ಸಿಎಂ ತೀರ್ಮಾನ ಮಾಡುತ್ತಾರೆ. ವರಿಷ್ಠರು ನನಗೆ ಹೆಚ್ಚಿನ ಜವಾಬ್ದಾರಿ ಕೊಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಂತ್ರಿ ಮಂಡಲ ವಿಸ್ತರಣೆ ಕುರಿತು ನಿಖರ ಮಾಹಿತಿ ಇಲ್ಲ. ನಾನೂ ದೆಹಲಿಗೆ ಹೋಗಿ ಬಂದಿದ್ದೇನೆ. ನಾಳೆ, ನಾಡಿದ್ದು ಆಗಬಹುದು ಅಥವಾ ಅಧಿವೇಶನ ಆದ ಬಳಿಕವೂ ಆಗಬಹುದು. ಸಮಯದ ಕೊರತೆಯಿಂದ ಮುಂದೆ ಹೋಗಿರಬಹುದು. ಆದರೆ ಸಂಪುಟ ವಿಸ್ತರಣೆ ಆಗೇ ಆಗುತ್ತೆ ಎಂದರು.

ಪಕ್ಷ ಹಾಗೂ ಸಿಎಂ ತೀರ್ಮಾನಕ್ಕೆ ನಾನು ಬದ್ಧ. ಮಂತ್ರಿ ಸ್ಥಾನ ಕೊಡದೇ ಇದ್ದರೆ ಪಕ್ಷದ ಕೆಲಸ ಮಾಡುತ್ತೇನೆ. ಅವಕಾಶ ಕೊಡುವುದು, ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಆಗಬಹುದು. ಹೈಕಮಾಂಡ್ ಒಪ್ಪಿದರೆ ಅಧಿವೇಶನದ ಒಳಗೇ ಆಗಬಹುದು. ಮಂತ್ರಿ ಆಗುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನ ರಾಜಕೀಯ ವಿರೋಧಿಗಳು. ಅವರು ನಮ್ಮ ಪಕ್ಷದ ಮೇಲೆ ಪ್ರಭಾವ ಬೀರುತ್ತಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ಕುಮಾರಸ್ವಾಮಿ ಸಿಎಂ ಭೇಟಿ ಮಾಡಿ ಕ್ಷೇತ್ರದ ವಿಚಾರ ಪ್ರಸ್ತಾಪ ಮಾಡಿದ್ದಾರೆ ಅಷ್ಟೆ. ನನಗೆ ಮಂತ್ರಿ ಸ್ಥಾನ ತಪ್ಪಿಸುವಷ್ಟು ಪ್ರಭಾವ ಶಾಲಿ ಕುಮಾರಸ್ವಾಮಿ ಅಲ್ಲ. ಇದು ನಮ್ಮ ಪಕ್ಷದ ಆಂತರಿಕ ವಿಚಾರ ಎಂದು ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

Comments

Leave a Reply

Your email address will not be published. Required fields are marked *