ಈಜು ಕಲಿಯಲು ಹೋದ ಯುವಕ ನೀರಲ್ಲಿ ಮುಳುಗಿ ಸಾವು

– ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಯಾದಗಿರಿ: ಈಜು ಕಲಿಯಲು ಹೋದ ಯುವಕ ಬಾವಿ ನೀರಲ್ಲಿ ಮುಳುಗಿ ಸಾವನಪ್ಪಿದ ಆಘಾತಕಾರಿ ಘಟನೆ ಜಿಲ್ಲೆಯ ಸುರಪುರದ ಫಕೀರ್ ಮೊಹಲ್ಲಾದಲ್ಲಿನ ತಂಗಿಬಾವಿಯಲ್ಲಿ ನಡೆದಿದೆ.

ಫಕೀರ್ ಮೊಹಲ್ಲಾದ ನಿವಾಸಿ ಅಲ್ತಾಫ್ ಬಾವಿಯಲ್ಲಿ ಮುಳುಗಿ ಮೃತಪಟ್ಟ ಯುವಕ. ಅಲ್ತಾಫ್ ಸಂಜೆ ತನ್ನ ಸ್ನೇಹಿತರೊಂದಿಗೆ ಈಜು ಕಲಿಯಲು ಮೀನುಗಾರಿಕೆ ಇಲಾಖೆ ಬಳಿಯ ತಂಗಿಬಾವಿಗೆ ತೆರಳಿದ್ದ, ಈಜು ಕಲಿಯಲು ಸೊಂಟಕ್ಕೆ ಪ್ಲಾಸ್ಟಿಕ್ ಬಾಕ್ಸ್ ಕಟ್ಟಿಕೊಂಡು, ಬಾವಿ ಮೇಲಿಂದ ಕೇಳಗೆ ಹಾರಿದ್ದಾನೆ. ಹಾರುವ ರಭಸದಲ್ಲಿ ಅಲ್ತಾಫ್ ಸೊಂಟ ಮತ್ತು ಪ್ಲಾಸ್ಟಿಕ್ ಬಾಕ್ಸ್ ನಡುವೆ ಕಟ್ಟಿದ ದಾರ ತುಂಡಾಗಿದೆ. ಅಲ್ತಾಫ್ ಗೆ ಸರಿಯಾಗಿ ಈಜು ಬಾರದ ಹಿನ್ನೆಲೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಅಗ್ನಿ ಶಾಮಕದಳ ಹಾಗೂ ಸ್ಥಳೀಯ ನುರಿತ ಮೀನುಗಾರರು ಯುವಕನ ಶವವನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾವಿಯ ಸುತ್ತಲೂ ಮೃತ ಅಲ್ತಾಫ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Comments

Leave a Reply

Your email address will not be published. Required fields are marked *