ಈಗ ಸಿಸೇರಿಯನ್ ಆಗಿದೆ, ಈಗಲೇ ಕುಲಾವಿ ಹಾಕಿಕೊಳ್ಳಬೇಡಿ: ಶಿವರಾಮೇಗೌಡ

– ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಶಾಸಕರಿಗೆ ಲೇವಡಿ

ಮಂಡ್ಯ: ಸಿಸೇರಿಯನ್ ಆಗಿ ಇನ್ನೂ ಹೊಲಿಗೆನೇ ಹಾಕಿಲ್ಲ. ಆಗಲೇ ಕುಲಾವಿ ಹಾಕಿಕೊಂಡು ತಿರುಗಿದರೆ ಹೆಂಗೆ ಎನ್ನುವ ಮೂಲಕ ಮಂತ್ರಿ ಸ್ಥಾನಕ್ಕೆ ಓಡಾಡುತ್ತಿರುವ ಬಿಜೆಪಿ ಶಾಸಕರಿಗೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಲೇವಡಿ ಮಾಡಿದ್ದಾರೆ.

ನಾಗಮಂಗಲದಲ್ಲಿ ಮಾತನಾಡಿದ ಅವರು, ಈಗ ತಾನೇ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈಗಲೇ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸಿ, ಅಸಮಾಧಾನವನ್ನು ಹೊರಹಾಕುವುದು ಸರಿಯಲ್ಲ. ಇದು ಒಂಥರ ಸಿಸೇರಿಯನ್ ಆಗಿ ಇನ್ನೂ ಹೊಲಿಗೇನೆ ಹಾಕಿಲ್ಲ ಆಗಲೇ ಕುಲಾವಿ ಹಾಕಿಕೊಂಡು ಓಡಾಡಿದ ಹಾಗೇ ಆಗುತ್ತದೆ ಎಂದು ಸಚಿವ ಸ್ಥಾನಕ್ಕೆ ಪೈಪೋಟಿ ಮಾಡುತ್ತಿರುವ ಶಾಸಕರುಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ದೇವೇಗೌಡರ ಭೇಟಿಯ ಕುರಿತು ಮಾತನಾಡಿದ ಅವರು, ದೇವೇಗೌಡರು ನಿಮ್ಮ ಸರ್ಕಾರದ ಜೊತೆ ನಾವಿದ್ದೀವಿ ಎಂದು ಹೇಳಿರುವುದು ರಾಜ್ಯದ ಜನರ ಒಳಿತಿಗಾಗಿ. ಕೊರೊನಾ, ಪ್ರವಾಹದಂತಹ ಸಂಕಷ್ಟದಲ್ಲಿ ರಾಜ್ಯದಲ್ಲಿ ಒಂದು ಸರ್ಕಾರ ಸ್ಥಿರವಾಗಿ ಇರಬೇಕು ಎನ್ನುವ ಕಾರಣಕ್ಕೆ ಗೌಡರು ನಾವಿದ್ದೇವೆ ಎನ್ನುವ ಭರವಸೆ ನೀಡಿದ್ದಾರೆ. ರಾಜ್ಯದ ಜನತೆ ಹಿತದೃಷ್ಟಿಯಿಂದ ದೇವೇಗೌಡರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಯಾರು ಕೂಡ ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸೂಕ್ತ ಅಲ್ಲ ಎಂದಿದ್ದಾರೆ.

ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಬೇಕು ಎಂದರೆ ಮಂಡ್ಯದವರೇ ಉಸ್ತುವಾರಿ ಸಚಿವರಾಗಬೇಕು. ಸದ್ಯ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಏಕೈಕ ಶಾಸಕ ಎಂದರೆ ಅದು ನಾರಾಯಣಗೌಡ ಮಾತ್ರ. ನಾರಾಯಣಗೌಡರಿಗೆ ಮಂತ್ರಿ ಸ್ಥಾನ ನೀಡಿ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ನೀಡಬೇಕು. ಆಗ ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಲು ಸಾಧ್ಯ ಎನ್ನುವ ಮೂಲಕ ಪರೋಕ್ಷವಾಗಿ ನಾರಾಯಣಗೌಡ ಅವರಿಗೆ ಮಂತ್ರಿ ಸ್ಥಾನ ನೀಡಿ ಎಂದು ಶಿವರಾಮೇಗೌಡ ನಾರಾಯಣಗೌಡ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಕೋವಿಡ್ ಬರೋಕೆ ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ: ಸಿದ್ದರಾಮಯ್ಯ

Comments

Leave a Reply

Your email address will not be published. Required fields are marked *