ಇಲಾಖೆ ಮರೆತ ಜಮೀನನ್ನು ವಾಪಸ್ ಪಡೆಯಲು ಮುಂದಾದ ಎಸ್‍ಪಿ ವರ್ತಿಕಾ

ಧಾರವಾಡ: ಸರ್ಕಾರಿ ಜಾಗಗಳು ಅತಿಕ್ರಮಣವಾದರೆ ಅದನ್ನು ತೆರವುಗೊಳಿಸುವುದಕ್ಕೆ ವಿವಿಧ ಇಲಾಖೆಗಳು ಪೊಲೀಸರ ಸಹಾಯವನ್ನು ಪಡೆಯುತ್ತಾರೆ. ಆದರೆ ಧಾರವಾಡದಲ್ಲೀಗ ಪೊಲೀಸರೇ ಕಂದಾಯ ಮತ್ತು ಭೂ ಮಾಪನ ಇಲಾಖೆ ಸಹಾಯದೊಂದಿಗೆ ತಮ್ಮದೇ ಜಾಗದ ಸರ್ವೆ ಮಾಡಲು ಹೋದ ಘಟನೆ ನಡೆದಿದೆ.

ಧಾರವಾಡ ಜಿಲ್ಲೆಯ ಮುಗದ ಗ್ರಾಮದಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯ ಒಂದು ಎಕರೆ ಜಾಗ ಇದೆ. ನಾಲ್ಕು ದಶಕಗಳ ಹಿಂದೆ ಇಲ್ಲೊಂದು ಪೊಲೀಸ್ ಠಾಣೆ ಅಲ್ಲದೇ ಪಿಎಸ್‍ಐ ಮತ್ತು 12 ಜನ ಪೊಲೀಸ್ ಪೇದೆಗಳ ವಸತಿ ನಿಲಯಗಳು ಇದ್ದವು. ಅವು ಈಗಲೂ ಇವೆ. ಆದರೆ ಅವುಗಳಲ್ಲಿ ಪೊಲೀಸ್ ಬದಲಿಗೆ ಮುಗದ ಗ್ರಾಮದ ಕೆಲ ಜನ ವಾಸಿಸುತ್ತಿದ್ದಾರೆ.

ಈ ಠಾಣೆ ಅಳ್ನಾವರ ಪಟ್ಟಣಕ್ಕೆ ಶಿಫ್ಟ್ ಆದ ಬಳಿಕ ಇಲಾಖೆ ಇದನ್ನು ಮರತೇ ಬಿಟ್ಟಿತ್ತು. ಆದರೆ ಈಗ ಧಾರವಾಡ ಎಸ್ಪಿ ಇದನ್ನು ಹುಡುಕಿಕೊಂಡು ಹೋಗಿದ್ದಾರೆ. ಮುಗದ ಗ್ರಾಮದ ಈ ಜಾಗದಲ್ಲಿ ಬ್ರಿಟಿಷ್ ಕಾಲದಿಂದಲೂ ಪೊಲೀಸ್ ಠಾಣೆ ಇತ್ತು. ಇಲಾಖೆಯೂ ಆ ಬಳಿಕ ಇದನ್ನು ಮರತೆ ಹೋಗಿತ್ತು. ದಿನ ಕಳೆದಂತೆ ಕಂದಾಯ ಇಲಾಖೆ ಇಲ್ಲಿ ಗ್ರಾಮ ಪಂಚಾಯ್ತಿ ಸಹ ಕಟ್ಟಿದ್ದಾರೆ. ಅದರ ಪಕ್ಕದಲ್ಲೇ ಅಂಗನವಾಡಿ ಕೇಂದ್ರವನ್ನು ನಿರ್ಮಿಸಲಾಗಿದೆ.

ಪೊಲೀಸ್ ಪೇದೆಗಳಿಗಾಗಿ ಇದ್ದ 12 ವಸತಿ ಗೃಹಗಳು ಊರಿನ ಜನ ತಮ್ಮ ಮನೆ ಮಾಡಕೊಂಡಿದ್ದಾರೆ. ಸದ್ಯ ಎಸ್‍ಪಿ ವರ್ತಿಕಾ ಕಟಿಯಾರ್ ಈ ಜಾಗ ಹುಡುಕಿಕೊಂಡು ಹೋದ ಬಳಿಕ ಸ್ಥಳೀಯರು ಜಾಗ ಬಿಟ್ಟು ಕೊಡಲು ಮುಂದಾಗಿದ್ದಾರೆ. ಆದರೆ ನಮ್ಮೂರಿನ ಠಾಣೆ ಇಲ್ಲಿಂದ ಹೋಗಿದೆ. ನಾವು ಎಲ್ಲವನ್ನೂ ಕೊಡುವುದಕ್ಕೆ ರೆಡಿ ಇದ್ದೇವೆ. ಆದರೆ ನಮ್ಮೂರಿನ ಠಾಣೆ ನಮಗೆ ವಾಪಸ್ ಕೊಡಿ ಎಂದು ಗ್ರಾಮಸ್ಥರು ಷರತ್ತು ಹಾಕಿದ್ದಾರೆ.

Comments

Leave a Reply

Your email address will not be published. Required fields are marked *