ಇಬ್ಬರು ಸೈನಿಕರನ್ನು ಕೊಂದಿದ್ದ ಐವರು ಉಗ್ರರನ್ನು ಬಂಧಿಸಿದ ಪೊಲೀಸರು

– ಉಗ್ರರ ಸಾಗಾಟಕ್ಕೆ ಅಂಬುಲೆನ್ಸ್ ಬಳಕೆ

ಶ್ರೀನಗರ: ಕಳೆದ ಮೇ ತಿಂಗಳಿನಲ್ಲಿ ಪಾಂಡಾಚ್ ಕಣಿವೆ ಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಿ, ಇಬ್ಬರು ಯೋಧರ ಸಾವಿಗೆ ಕಾರಣವಾಗಿದ್ದ ಐವರು ಉಗ್ರರನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ.

ಇಂದು ಉಗ್ರರ ಅಡಗು ತಾಣಗಳ ಮೇಲೆ ದಾಳಿ ಮಾಡಿದ ಶ್ರೀನಗರ ಪೊಲೀಸರು, ಐದು ಇಸ್ಲಾಮಿಕ್ ಸ್ಟೇಟ್ ಅಫ್ ಜಮ್ಮು ಮತ್ತು ಕಾಶ್ಮೀರ ಉಗ್ರ ಸಂಘಟನೆಯ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಜೊತೆಗೆ ಉಗ್ರರು ದಾಳಿ ವೇಳೆ ಓಡಾಡಲು ಬಳಸುತ್ತಿದ್ದ ಎರಡು ಅಂಬುಲೆನ್ಸ್ ಗಳು ಮತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

https://www.facebook.com/permalink.php?story_fbid=1204778106547689&id=393254284366746

ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಶ್ರೀನಗರ ಪೊಲೀಸರು, ಕಳೆದ ಮೇ 20ರಂದು ನಡೆದ ಪಾಂಡಚ್ ಉಗ್ರರ ದಾಳಿಯ ಪ್ರಕರಣವನ್ನು ಶ್ರೀನಗರ ಪೊಲೀಸರು ಬಗೆಹರಿಸಿದ್ದಾರೆ. ಈ ದಾಳಿಯಲ್ಲಿ ಭಾರತೀಯ ಸೇನೆಯ 37 ಬೆಟಾಲಿಯನ್‍ನ 2 ಬಿಎಸ್‍ಎಫ್ ಜವಾನರು ಹುತಾತ್ಮರಾಗಿದ್ದರು. ಈ ದಾಳಿ ಮಾಡಲು ಪ್ಲಾನ್ ಮಾಡಿದ ಮತ್ತು ದಾಳಿಯಲ್ಲಿ ಭಾಗವಹಿಸಿದ ಐದು ಮಂದಿ ಉಗ್ರರನ್ನು ಬಂಧಿಸಿದ್ದೇವೆ ಎಂದು ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮಾಡಲಾಗಿದೆ. ಈ ವೇಳೆ ಶೇರ್-ಐ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಖಾಸಗಿ ಅಂಬುಲೆನ್ಸ್ ಗಳು ಮತ್ತು ಒಂದು ಬೈಕು ಮತ್ತು ಸ್ಕೂಟಿ ಸೇರಿದಂತೆ ನಾಲ್ಕು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ತನಿಖೆಗೆ ಅನುಮೋದನೆ ನೀಡುವಂತೆ ಡಿಜಿಪಿ ದಿಲ್ಬಾಗ್ ಸಿಂಗ್ ಅವರನ್ನು ಮನವಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಶಪಡಿಸಿಕೊಂಡ ಅಂಬುಲೆನ್ಸ್ ಗಳನ್ನು ಶ್ರೀನಗರದಿಂದ ಬಿಜ್ಬೆಹರಾಕ್ಕೆ ಉಗ್ರರನ್ನು ಪೊಲೀಸರಿಗೆ ಕಾಣದಂತೆ ಸಾಗಿಸಲು ಬಳಸಲಾಗಿತ್ತು. ಇವರನ್ನು ಬಿಟ್ಟರೆ ದಾಳಿಯಲ್ಲಿ ಭಾಗಿಯಾಗಿದ್ದ ಉಳಿದ ಉಗ್ರರನ್ನು ಜಾದಿಬಾಲ್, ಶ್ರೀನಗರ ಮತ್ತು ಹತಿಗಮ್, ಬಿಜ್ಬೆಹರಾದಲ್ಲಿ ನಡೆದ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಹೊಡೆದು ಹಾಕಲಾಗಿದೆ. ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *