ಇದೊಂದು ಅನೈತಿಕ ಸರ್ಕಾರ – ಬಜೆಟ್ ಮಂಡನೆಗೆ ಅಡ್ಡಿ, ಕಾಂಗ್ರೆಸ್ ಸಭಾತ್ಯಾಗ

ಬೆಂಗಳೂರು: ಸಿಎಂ ಯಡಿಯೂರಪ್ಪ ಬಜೆಟ್ ಭಾಷಣಕ್ಕೆ ಕಾಂಗ್ರೆಸ್ ಸದಸ್ಯರು ಅಡ್ಡಿ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ್ದಾರೆ. ಯಡಿಯೂರಪ್ಪ ಭಾಷಣ ಓದುತ್ತಿದ್ದಂತೆ ಗದ್ದಲ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು ಈ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿ ಸಭಾತ್ಯಾಗ ಮಾಡಿದ್ದಾರೆ.

ಸಿಎಂ ಬಜೆಟ್ ಮಂಡನೆಗೂ ಮುನ್ನ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನೈತಿಕ ಸರ್ಕಾರ ಬಜೆಟ್ ಮಂಡಿಸುವುದನ್ನು ನಾವು ಕೇಳುತ್ತಾ ಕುಳಿತುಕೊಳ್ಳಬೇಕಾ. ನಾವು ಪ್ರತಿಭಟನೆ ಮಾಡುತ್ತೇವೆ. ಸದನದಲ್ಲಿ ಕಪ್ಪು ಬಟ್ಟೆ ಕಟ್ಟಿಕೊಂಡು ಸರ್ಕಾರವನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ರಾಜ್ಯದ ಮುಂಗಡ ಪತ್ರ ಮಂಡಿಸಲು ಅಧಿವೇಶನ ಕರೆದಿದ್ದಾರೆ. ಈ ರಾಜ್ಯ ಸರ್ಕಾರಕ್ಕೆ ಆಯವ್ಯಯ ಮಂಡಿಸಲು ನೈತಿಕತೆ ಇಲ್ಲ. ಯಡಿಯೂರಪ್ಪ ಸಹಿತ ಎಲ್ಲರೂ ರಾಜೀನಾಮೆ ಕೊಡಬೇಕು. ಅನೈತಿಕ ಸರ್ಕಾರ ಬಜೆಟ್ ಮಂಡಿಸುವುದನ್ನ ನಾವು ಕೇಳುತ್ತಾ ಕುಳಿತುಕೊಳ್ಳಬೇಕಾ ಎಂದು ಪ್ರಶ್ನಿಸಿದರು.

ಸಿಡಿಗಳು ಇದಾವೆ, ಸಿಕ್ಕಿಬಿಡ್ತಾವೆ, ಟೆಲಿಕ್ಯಾಸ್ಟ್ ಮಾಡಬೇಡಿ ಅಂತಾ ಹೋಗಿದ್ದಾರೆ. ಇನ್ನೂ ಕೆಲವರ ಸಿಡಿಗಳು ಇದ್ದಾವೇ ಅಂತಾರೆ. 19 ಸಿಡಿಗಳು ಇವೆ ಅಂತಾ ಅವರೇ ಹೇಳಿದ್ದಾರೆ. ಹಾಗಾಗಿ ಸರ್ಕಾರ ಅನೈತಿಕತೆ ಮೂಟೆ ಹೊತ್ತಿಕೊಂಡಿದೆ. ಬಜೆಟ್ ಮಂಡನೆ ವೇಳೆ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದೇವೆ. ಬಜೆಟ್ ವಿರೋಧಿಸಿ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡುತ್ತೇವೆ ಎಂದರು.

ರಾಸಲೀಲೆ ಪ್ರಕರಣದಲ್ಲಿ ಸಚಿವರು ರಾಜೀನಾಮೆ ಕೊಟ್ಟ ಮೇಲೆ 6 ಮಂದಿ ಸಚಿವರು ಭಯದಿಂದ ಓಡಿದ್ದಾರೆ. ಏಕೆ ಈ ಆರು ಜನರಿಗೆ ಭಯ? ನಾವು ತಪ್ಪು ಮಾಡಿದ್ದೇವೆ ಎಂಬ ಭಾವನೆ ಇವರಿಗೆ. ಈ ಕಾರಣಕ್ಕೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಮಾಡದಂತೆ ತಡೆ ಆರ್ಡರ್ ತಗೆದುಕೊಂಡು ಭಯದಿಂದ ಓಡಿ ಹೋಗಿದ್ದಾರೆ ಎಂದು ಟೀಕಿಸಿದರು.

Comments

Leave a Reply

Your email address will not be published. Required fields are marked *