ಇದೇ ವರ್ಷ ತೆರೆಕಂಡಿದ್ವು ಚಿರು ನಟನೆಯ ಮೂರು ಸಿನಿಮಾಗಳು

ಬೆಂಗಳೂರು: ಪ್ರತಿಭಾವಂತ, ಸದಾ ನಗುಮುಖದ ಯುವ ನಟ ಚಿರಂಜೀವಿ ಸರ್ಜಾ ಇಂದು ನಮ್ಮನ್ನ ಅಗಲಿದ್ದಾರೆ. ಅವರ ಸಾವಿನ ಸುದ್ದಿ ಸಾಂಡಲ್‍ವುಡ್ ನಟ, ನಟಿಯರು, ಕಲಾವಿದರು, ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ.

ಚಿರು 2009ರಲ್ಲಿ ‘ವಾಯುಪುತ್ರ’ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಗನಾಗಿ ತೆರೆಹಂಚಿಕೊಂಡಿದ್ದರು. ಕನ್ನಡ ಚಿತ್ರರಂಗದ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ ಕುಟುಂಬದಲ್ಲಿ ಬೆಳೆದ ಚಿರಂಜೀವಿ ಸರ್ಜಾ ಹಿರಿಯರಿಗೆ ಗೌರ, ಕಿರಿಯರಿಗೆ ಪ್ರೀತಿ ಕೊಟ್ಟು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಚಿರಂಜೀವಿ ಸರ್ಜಾ ನಟನೆಯ ಮೂರು ಸಿನಿಮಾಗಳು ಇದೇ ವರ್ಷ ತೆರೆ ಕಂಡಿದ್ದವು. ಜನವರಿ ತಿಂಗಳಿನಲ್ಲಿ ‘ಖಾಕಿ’ ಸಿನಿಮಾ ತೆರೆಕಂಡಿತ್ತು. ನವೀನ್ ರೆಡ್ಡಿ ನಿರ್ದೇಶನದ ಈ ಸಿನಿಮಾ ಪಕ್ಕಾ ಕಮರ್ಷಿಯಲ್ ಮಾದರಿಯ ಸಿನಿಮಾವಾಗಿತ್ತು. ತರುಣ್ ಶಿವಪ್ಪ ಮತ್ತು ಮಾನಸಾ ತರುಣ್ ಜಂಟಿಯಾಗಿ ‘ಖಾಕಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.

‘ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯ ಜೊತೆಗೆ ಚಿರಂಜೀವಿ ಸರ್ಜಾ ಉತ್ತಮ ಒಡನಾಟ ಹೊಂದಿದ್ದರು. ಚೈತನ್ಯ ಅವರ ‘ಆಟಗಾರ’, ‘ಆಕೆ’, ‘ಅಮ್ಮ ಐ ಲವ್ ಯೂ’, ಹಾಗೂ ಈ ವರ್ಷ ಫೆಬ್ರವರಿಯಲ್ಲಿ ತೆರೆ ಕಂಡ ‘ಆದ್ಯಾ’ ಸಿನಿಮಾಗಳಲ್ಲಿ ಚಿರು ನಟಿಸಿದ್ದರು.

ಮಾರ್ಚ್ 12ರಂದು ಸಿನಿಮಾ ತೆರೆ ಕಂಡಿದ್ದ ‘ಶಿವಾರ್ಜುನ’ ಸಿನಿಮಾವನ್ನು ಬಹಳ ಪ್ರೀತಿಯಿಂದ ಮಾಡಿದ್ದರು. ದುರಾದೃಷ್ಟವಶಾತ್ ಸಿನಿಮಾ ರಿಲೀಸ್ ಆದ ಎರಡೇ ದಿನಕ್ಕೆ ಕೊರೊನಾ ವೈರಸ್‍ನಿಂದಾಗಿ ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ಆದೇಶ ಹೊರಬಿದ್ದಿತ್ತು. ಹಾಗಾಗಿ ‘ಶಿವಾರ್ಜುನ’ ಸಿನಿಮಾ ಎರಡೇ ದಿನಕ್ಕೆ ಪ್ರದರ್ಶನವನ್ನು ನಿಲ್ಲಿಸಬೇಕಾಗ ಅನಿವಾರ್ಯತೆ ಎದುರಾಯಿಗಿತ್ತು.

ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಉಳಿದಿದ್ದ ಚಿರು ಕುಟುಂಬದೊಂದಿಗೆ ಖುಷಿ, ಖುಷಿಯಾಗಿ ಕಾಲ ಕಳೆಯುತ್ತಿದ್ದರು. ಆದರೆ ನಿನ್ನೆ ರಾತ್ರಿಯಿಂದ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ತಮ್ಮ 39ನೇ ವರ್ಷಕ್ಕೆ ಬಾರದ ಲೋಕಕ್ಕೆ ತೆರೆಳಿದ್ದಾರೆ.

Comments

Leave a Reply

Your email address will not be published. Required fields are marked *