ಇತಿಹಾಸ, ವಾಸ್ತವ ಎರಡನ್ನೂ ಹೇಳಲಿದೆ ಈ ‘ಗಡಿಯಾರ’ ಸಿನಿಮಾ

ಸ್ಯಾಂಡಲ್‍ವುಡ್ ಅಂಗಳದಲ್ಲಿ ಮತ್ತೊಂದು ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿದೆ. ಕಳೆದು ಹೋದ ಘಟನೆಗಳ ಜೊತೆ ವಾಸ್ತವವನ್ನು ತಿಳಿಸಲು ಬರುತ್ತಿರುವ ಈ ಚಿತ್ರದ ಹೆಸರು ‘ಗಡಿಯಾರ’. ಪ್ರಬಿಕ್ ಮೊಗವೀರ್ ನಿರ್ದೇಶನದ ‘ಗಡಿಯಾರ’ ಸಿನಿಮಾ ಕೋವಿಡ್ ಅನ್‍ಲಾಕ್ ಬಳಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಚಿತ್ರ. ಇದೇ ವಾರ ನವೆಂಬರ್ 27ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ.

ಲಾಕ್‍ಡೌನ್ ಬಳಿಕ ಚಿತ್ರದ ತುಣುಕುಗಳ ಮೂಲಕ ಸದ್ದು ಮಾಡುತ್ತಿದ್ದ ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಗರಿಗೆದರಿದೆ. ಕಳೆದ ನವೆಂಬರ್ ನಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿದ್ದ ‘ಗಡಿಯಾರ’ ಸಿನಿಮಾ ಮಾರ್ಚ್ ನಲ್ಲಿ ರಿಲೀಸ್‍ಗೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಕೊರೊನಾದಿಂದಾಗಿ ಸಾಧ್ಯವಾಗಿರಲಿಲ್ಲ. ಈಗ ಬಹು ನಿರೀಕ್ಷೆಯೊಂದಿಗೆ ಸಿನಿಮಾ ತೆರೆಗೆ ತರಲು ಚಿತ್ರತಂಡ ಸಿದ್ಧವಾಗಿದೆ.

ರಾಜಮನೆತನಗಳ ಇತಿಹಾಸ ನೆನಪಿಸುವುದರ ಜೊತೆಗೆ ಹಾರಾರ್, ಸಸ್ಪೆನ್ಸ್, ಕಾಮಿಡಿ, ಸಾಹಸ ಸೇರಿದಂತೆ ಪ್ರತಿಯೊಂದು ಕಮರ್ಶಿಯಲ್ ಎಳೆಯೂ ಚಿತ್ರದಲ್ಲಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ ಎನ್ನೋದು ಚಿತ್ರತಂಡದ ಮಾತು. ಸಿನಿಮಾ ಸೂತ್ರದಾರರಾದ ಪ್ರಬಿಕ್ ಮೊಗವೀರ್ ತಾವೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆ ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ರಾಜ್ ದೀಪಕ್ ಶೆಟ್ಟಿ, ಶೀತಲ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಸುಚೇಂದ್ರಪ್ರಸಾದ್, ಶರತ್ ಲೋಹಿತಾಶ್ವ, ಮನ್‍ದೀಪ್ ರಾಯ್, ಲೀಲಾಮೋಹನ್, ಗಣೇಶ್ ರಾವ್ ಸೇರಿದಂತೆ ದೊಡ್ಡ ಕಲಾವಿದರ ದಂಡು ಚಿತ್ರದಲ್ಲಿದೆ. ಇನ್ನೊಂದು ಇಂಟ್ರಸ್ಟಿಂಗ್ ಸಂಗತಿಯಂದ್ರೆ ಮಾಜಿ ಪೊಲೀಸ್ ಕಮಿಷನರ್ ಎಸ್.ಪಿ. ಸಾಂಗ್ಲಿಯಾನ, ಮಲಯಾಳಂ ನಟ ಎಂ.ಟಿ.ರಿಹಾಜ್, ಬಾಲಿವುಡ್ ನಟ ಗೌರಿಶಂಕರ್ ಅವರನ್ನು ಚಿತ್ರದ ವಿಶೇಷ ಸನ್ನಿವೇಶಕ್ಕಾಗಿ ತೆರೆ ಮೇಲೆ ಕರೆತರಲಾಗಿದೆ.

ಆತ್ಮ ಸಿನಿಮಾಸ್ ಬ್ಯಾನರ್‍ನಡಿ ನಿರ್ಮಾಣವಾಗಿರೋ ‘ಗಡಿಯಾರ’ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಕ್ಯಾಮೆರಾ ನಿರ್ದೇಶನ, ರಾಘವ್ ಸುಭಾಷ್ ಸಂಗೀತ ನಿರ್ದೇಶನವಿದೆ. ಸಾಕಷ್ಟು ಕುತೂಹಲವನ್ನು ಸಿನಿರಸಿಕರಲ್ಲಿ ಹುಟ್ಟುಹಾಕಿರುವ ಗರಿಯಾರ ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.

Comments

Leave a Reply

Your email address will not be published. Required fields are marked *