ಇಂದು ಹಸೆಮಣೆ ಏರಬೇಕಿದ್ದ ಮದುಮಗ ಕಾನ್‌ಸ್ಟೇಬಲ್‌ಗೆ ಕೊರೊನಾ

– ಮದುಮಗ ಆಸ್ಪತ್ರೆಗೆ, ಸಂಬಂಧಿಕರು ಕ್ವಾರಂಟೈನ್‍ಗೆ

ವಿಜಯಪುರ: ಜಿಲ್ಲೆಯಲ್ಲಿ ಮದುವೆ ಮನೆಗೆ ಮಹಾಮಾರಿ ಕೊರೊನಾ ವಕ್ಕರಿಸಿದ್ದು, ಮದುಮಗನಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ವಿವಾಹವನ್ನು ಮುಂದೂಡಲಾಗಿದೆ.

ವಿವಾಹವಾಗಲು ಹೊರಟಿದ್ದ ಪೊಲೀಸ್ ಕಾನ್‌ಸ್ಟೇಬಲ್‌ಗೆ ಸೋಂಕು ತಗುಲಿದ್ದು, ಹಸೆಮಣೆ ಏರಬೇಕಿದ್ದ ಮದುಮಗ ಆಸ್ಪತ್ರೆ ಸೇರಿದ್ದಾರೆ. ಹೀಗಾಗಿ ಇಂದು ನಡೆಯಬೇಕಿದ್ದ ಮದುವೆಯನ್ನು ರದ್ದು ಮಾಡಲಾಗಿದೆ. ಮದುಮಗ ಆಸ್ಪತ್ರೆಗೆ ಹೋಗಿದ್ದು, ಕಾನ್‌ಸ್ಟೇಬಲ್‌ ಸಂಪರ್ಕಕ್ಕೆ ಬಂದವರು ಹಾಗೂ ಸಂಬಂಧಿಕರು ಕ್ವಾರಂಟೈನ್‍ಗೆ ಹೋಗಿದ್ದಾರೆ.

26 ವರ್ಷದ ಪೊಲೀಸ್ ಕಾನ್‌ಸ್ಟೇಬಲ್‌ನಲ್ಲಿ ಕೊರೊನಾ ಪತ್ತೆಯಾಗಿದ್ದು, ಈ ಪೊಲೀಸ್ ಪೇದೆ ಬೆಂಗಳೂರಿನ ಕಮಿಷಿನರೇಟ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮದುವೆ ಹಿನ್ನೆಲೆಯಲ್ಲಿ ರಜೆ ಪಡೆದು ವಿಜಯಪುರಕ್ಕೆ ಬಂದಿದ್ದರು. ಆಗ ಆರೋಗ್ಯ ಇಲಾಖೆ ಸ್ವಾಬ್ ಕಲೆಕ್ಟ್ ಮಾಡಿ ಪರೀಕ್ಷೆಗೆ ಕಳಿಸಿತ್ತು. ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಮನೆಯವರನ್ನು ಮನವೊಲಿಸಿ ಮದುವೆ ಮುಂದೂಡಿಸಲಾಗಿದೆ ಎಂದು ಡಿಸಿ ವೈ.ಎಸ್.ಪಾಟೀಲ್ ತಿಳಿಸಿದರು.

ಸೋಂಕಿತ ಕಾನ್‌ಸ್ಟೇಬಲ್‌ ಸಂಪರ್ಕಕ್ಕೆ ಬಂದ 30 ಜನರ ಸ್ವ್ಯಾಬ್ ಕಲೆಕ್ಟ್ ಮಾಡಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದಾರೆ. ಒಟ್ಟಿನಲ್ಲಿ ಇಂದು ಮದುವೆ ಸಂಭ್ರಮದಲ್ಲಿರಬೇಕಾದ ಮದುವೆ ಮನೆಯಲ್ಲಿ ಕೊರೊನಾ ನೆರಳು ಬಿದ್ದಿದೆ.

Comments

Leave a Reply

Your email address will not be published. Required fields are marked *